ದೆಹಲಿ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ವಿಶ್ವ ಪಾರಂಪರಿಕ ತಾಣ, ರಾಷ್ಟ್ರ ರಾಜಧಾನಿಯ ಐತಿಹಾಸಿಕ ಸಂಕೀರ್ಣ ಕಟ್ಟಡ ಕುತುಬ್ ಮಿನಾರ್ನ ಕಾಂಪೌಂಡ್ಗೆ ಡಿಕ್ಕಿ ಹೊಡೆದಿದ್ದು, ಸುಮಾರು 50 ಮೀಟರ್ ದೂರ ಗೋಡೆ ಹಾನಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹತ್ತಿಕೊಂಡ ಕಾರು ಸುಟ್ಟುಕರಕಲಾಗಿದೆ. ಸ್ಥಳದಲ್ಲೇ ಇದ್ದ ಕಾವಲುಗಾರನೊಬ್ಬ ಚಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 4ರ ಬೆಳಗಿನ ಜಾವ 3.45ರಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ಮಹಿಪಾಲ್ಪುರ ನಿವಾಸಿ ಅರುಣ್ ಚೌಹಾಣ್(31) ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ದ್ವಾರಕಾದ ಸೆಕ್ಟರ್-23 ಪ್ರದೇಶದಲ್ಲಿ ಹಳೇ ಕಾರು ಮಾರಾಟ ಮತ್ತು ಖರೀದಿ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ 10ನೇ ತರಗತಿ ಮಕ್ಕಳಿಗೆ ‘ದತ್ತ ಮೇಷ್ಟ್ರು’ ಪಾಠ!
ಅರುಣ್ ಚೌಹಾಣ್ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿದ ಕಾರು ಕುತುಬ್ ಮಿನಾರ್ ಸಂಕೀರ್ಣ ಕಟ್ಟಡದ ಕಾಂಪೌಂಡ್ಗೆ ಡಿಕ್ಕಿಯಾಗಿ ಸುಮಾರು ದೂರ ಗೋಡೆಯನ್ನು ಉಜ್ಜಿಕೊಂಡು ಮುಂದೆ ಸಾಗಿದೆ. ಇದಾದ ಕ್ಷಣಾರ್ಧದಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಇದ್ದ ಭಾರತೀಯ ಪುರಾತತ್ವ ಸಮೀಕ್ಷೆ ಸಂಸ್ಥೆಯ ಕಾವಲುಗಾರರೊಬ್ಬರು ಕಾರಿನಿಂದ ಚಾಲಕನನ್ನು ಹೊರಗೆಳೆದು ಪ್ರಾಣ ಉಳಿಸಿದ್ದಾರೆ.
ಅವಘಡದಲ್ಲಿ ಗಾಯಗೊಂಡ ಆರೋಪಿಯನ್ನು ಪೊಲೀಸ್ ವಾಹನದಲ್ಲೇ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಮಾರಕ ಕಟ್ಟಡಕ್ಕೆ ಹಾನಿ ಮಾಡಿದ ಆರೋಪದಡಿ ಚೌಹಾಣ್ ವಿರುದ್ಧ ಭಾರತೀಯ ಪುರಾತತ್ವ ಸಮೀಕ್ಷೆಯು ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್)