ಚನ್ನಗಿರಿ: ಕಷ್ಟದಲ್ಲಿರುವ ಜನರಿಗೆ ಪ್ರತಿಯೊಬ್ಬರು ಸಹಾಯ ಮಾಡಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಇಲ್ಲಿನ ಜವಳಿ ಸಮುದಾಯ ಭವನದಲ್ಲಿ ಸೋಮವಾರ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಯ ಒಂದೇ ರೀತಿ ಇರುವುದಿಲ್ಲ. ಇನ್ನೊಬ್ಬರಿಗೆ ತಿಳಿಯದಂತೆ ಸಹಾಯ ಮಾಡುವವರ ಸಂಖ್ಯೆ ಹೆಚ್ಚಿದೆ. ಭಾರತೀಯರಾದ ನಾವು ಸಂಸ್ಕಾರ ಅರಿತವರು. ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಸಹೋದರರಂತೆ ಬಂದಿದ್ದೇವೆ ಎಂದರು.
ಕರೊನಾ ದೇಶದಲ್ಲಿ ಕಾಣಿಸಿಕೊಂಡ ನಂತರದಲ್ಲಿ ನ್ಯಾಯಬೆಲೆ ಅಂಗಡಿಯವರು ಪಡಿತರವನ್ನು ವಿತರಿಸುವಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ನ್ಯಾಯಬೆಲೆ ಅಂಗಡಿಯಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಟ್ಟಿರಬೇಕು. ಬಯೋಮೆಟ್ರಿಕ್ ವ್ಯವಸ್ಥೆ ತೆಗೆದುಹಾಕಲಾಗಿದೆ. ಜನರಿಗೆ ತೊಂದರೆ ಆಗಬಾರದು ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಉಗ್ಗಿ ಉಮೇಶ್ ಮಾತನಾಡಿ, ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ವಿತರಿಸಿದ ಪಡಿತರದ ಕಮೀಷನ್ ಇದುವರೆಗೆ ಬಂದಿಲ್ಲ. ತಾಲೂಕಿನಲ್ಲಿ ಶೇ.93.6ರಷ್ಟು ಪಡಿತರವನ್ನು ವಿತರಿಸಲಾಗಿದೆ ಎಂದರು.
ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಜಯರಾಮ್, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊನ್ನೆಬಾಗಿ ಇದ್ದರು.