ಹುಬ್ಬಳ್ಳಿ : ನಗರದ ಕನಕದಾಸ ಶಿಕ್ಷಣ ಸಮಿತಿಯ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ‘ಸಮಾಜಕಾರ್ಯ ಜಾಗೃತಿ ಶಿಬಿರ’ವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಅತಿಥಿಯಾಗಿದ್ದ ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಮಾತನಾಡಿ, ಸಮಾಜಕಾರ್ಯ ವಿದ್ಯಾರ್ಥಿಗಳು ಒಳ್ಳೆಯ ಕಾರ್ಯಗಳನ್ನು ಮಾಡುವ ಮಹಾನ್ ವ್ಯಕ್ತಿಗಳಾಗಬೇಕು. ಸರ್ಕಾರೇತರ ಸಂಸ್ಥೆಗಳನ್ನು ರಚಿಸಿಕೊಂಡು, ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ನಿರ್ದಿಷ್ಟ ಗುರಿ ಸಾಧಿಸಲು ಜ್ಞಾನ, ಆತ್ಮವಿಶ್ವಾಸ ಹಾಗೂ ಸೇವಾ ಮನೋಭಾವನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅತಿಥಿಯಾಗಿದ್ದ ಎನ್ಎಸ್ಐಎಲ್ ನಿಕಟಪೂರ್ವ ನಿರ್ದೇಶಕ ತೋಟಪ್ಪ ನಿಡಗುಂದಿ ಮಾತನಾಡಿ, ಶಿಕ್ಷಣವು ಜೀವನಪರ್ಯಂತ ಸಮಾಜದಲ್ಲಿ ಬದುಕುವಂತೆ ಮಾಡುತ್ತದೆ ಎಂದು ಹೇಳಿದರು.
ಕೆಎಸ್ಎಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಬೀರೇಶ ತಿರಕಪ್ಪನವರ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಂದೀಪ ಬೂದಿಹಾಳ ಮಾತನಾಡಿದರು.
ಪ್ರಾಚಾರ್ಯ ಪ್ರೊ. ಮಹೇಶ ಗೌಡಪ್ಪಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಬಿರಾಧಿಕಾರಿ ಉಪನ್ಯಾಸಕಿ ಲೀಲಾವತಿ ಗ್ವಾತಗಿ, ಸಹ ಶಿಬಿರಾಧಿಕಾರಿಗಲಾದ ರವಿ ಗಸ್ತಿ ಹಾಗೂ ಇತರರು ಉಪಸ್ಥಿತರಿದ್ದರು.