ಕೊಲ್ಕತ : ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಚುನಾವಣಾ ನಂತರದ ಹಿಂಸಾಚಾರದ ಎಲ್ಲಾ ಸಂತ್ರಸ್ತರ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಕಲ್ಕತ್ತಾ ಹೈಕೋರ್ಟ್ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿದೆ. ಜೊತೆಗೆ ಎಲ್ಲಾ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಪಡಿತರ ಚೀಟಿ ಇಲ್ಲದೆ ಇದ್ದರೂ ಸಹ ಪಡಿತರ ಲಭ್ಯವಾಗುವುದನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಬಂಗಾಳದ ಚುನಾವಣಾ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸುರಕ್ಷಿತವಾಗಿರಿಸಬೇಕೆಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಕೋರ್ಟ್ ಸೂಚಿಸಿದೆ. ಈ ಹಿಂಸಾಚಾರದಲ್ಲಿ ಸಾಯಿಸಲ್ಪಟ್ಟರು ಎನ್ನಲಾದ ಬಿಜೆಪಿ ನಾಯಕ ಅಭಿಜಿತ್ ಸರ್ಕಾರ್ ಅವರ ಎರಡನೇ ಮರಣೋತ್ತರ ಪರೀಕ್ಷೆ ನಡೆಸಲು ಕೋರ್ಟ್ ನಿರ್ದೇಶಿಸಿದೆ. ಕೊಲ್ಕತಾದ ಕಮ್ಯಾಂಡ್ ಹಾಸ್ಪಿಟಲ್ನಲ್ಲಿ ಈ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ: ರಾತ್ರೋರಾತ್ರಿ ಒಂದು ಕಿ.ಮೀ ಉದ್ದದ ರಸ್ತೆ ‘ಕಳುವು’: ಹೀಗೊಂದು ವಿಚಿತ್ರ ಘಟನೆ- ದೂರು ದಾಖಲು
ರಾಜ್ಯ ಪೊಲೀಸರಿಂದ ಪಡೆದ ಮಾಹಿತಿಗಳ ಮೇಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ) ಸಲ್ಲಿಸಿದ ಮಧ್ಯಂತರ ವರದಿಯ ಆಧಾರದ ಮೇಲೆ ಈ ನಿರ್ದೇಶನಗಳನ್ನು ನ್ಯಾಯಾಲಯ ಹೊರಡಿಸಿದೆ. ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಭಾರೀ ಬಹುಮತದಿಂದ ಗೆದ್ದ ನಂತರ ರಾಜಕೀಯ ಹಿಂಸಾಚಾರದ ಪ್ರಕರಣಗಳು ಹೆಚ್ಚಿದ್ದವು. ಟಿಎಂಸಿ ಮತ್ತು ವಿರೋಧ ಪಕ್ಷವಾದ ಬಿಜೆಪಿ ಪರಸ್ಪರರ ವಿರುದ್ಧ ತಂತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡುತ್ತಾ ಬಂದಿವೆ.
ರಾಜ್ಯದ ಜಾದವಪುರ ಜಿಲ್ಲೆಗೆ ಹೈಕೋರ್ಟ್ ಆದೇಶಾನುಸಾರ ತನಿಖೆ ನಡೆಸಲು ಹೋದ ಎನ್ಎಚ್ಆರ್ಸಿ ತಂಡದ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ, ಅಲ್ಲಿನ ಎಸ್ಪಿ ಮತ್ತು ಡಿಎಂಗೆ ಕೋರ್ಟ್ ಶೋ ಕಾಸ್ ನೋಟೀಸ್ಗಳನ್ನು ಜಾರಿಮಾಡಿದೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಯಾಕೆ ಹೂಡಬಾರದು ಎಂದು ಕೋರ್ಟ್ ಪ್ರಶ್ನಿಸಿದೆ. (ಏಜೆನ್ಸೀಸ್)
ಸಾಂಕ್ರಾಮಿಕದಲ್ಲಿ ಲಾಭ ಗಳಿಸುವುದು ಹೇಗೆ ಎಂದು ಶ್ವೇತಪತ್ರ ಪ್ರಕಟಿಸಿ: ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಟಾಂಗ್
ಸಂಚಾರಿ ವಿಜಯ್ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್ ಸವಾರ ನವೀನ್