ಬೆಂಗಳೂರು: ಪಟ್ಟು ಸಡಿಲಿಸದೆ ಹಠ ಹಿಡಿದು, ವರಿಷ್ಠರ ಓಲೈಸಿ ಸಂಪುಟ ಕಗ್ಗಂಟು ಬಿಡಿಸುವಲ್ಲಿ ಯಶಸ್ವಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಸಚಿವಗಿರಿ ಆಕಾಂಕ್ಷಿಗಳ ಮನವೊಲಿಸುವ ಕಾರ್ಯದಲ್ಲಿ ರಕ್ಷಣಾತ್ಮಕ ಆಟಕ್ಕೆ ಇಳಿದಿದ್ದಾರೆ. ಸಂಪುಟ ವಿಸ್ತರಣೆಗೆ ಎರಡು ದಿನ ಬಾಕಿ ಇರುವಂತೆ ಸಿಎಂ ನಿವಾಸ ಧವಳಗಿರಿ ಸುತ್ತ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರ ಹಿಂಡೇ ಹರಿದು ಬರುತ್ತಿದ್ದು, ಎಲ್ಲರನ್ನೂ ಶಾಂತಚಿತ್ತದಿಂದ ಓಲೈಸುವತ್ತ ಸಿಎಂ ನಿರತರಾಗಿದ್ದಾರೆ.
ಏತನ್ಮಧ್ಯೆ ಮೂಲ ಬಿಜೆಪಿ ಶಾಸಕರು ಶಾಸಕರ ಭವನದಲ್ಲಿ ದಿಢೀರ್ ಸಭೆ ನಡೆಸಿ ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವುದು ಹೊಸ ಬೆಳವಣಿಗೆ. ಈ ಅತೃಪ್ತಿಯ ಬೆಂಕಿ ಆರಿಸುವ ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಅತೃಪ್ತರೊಂದಿಗೆ ಸೋಮವಾರವೂ ಸರಣಿ ಮಾತುಕತೆ ಮುಂದುವರಿಸಿದರು. ಸೋಮವಾರ ಬೆಳಗ್ಗೆಯೇ ಸಿಎಂ ಮನೆಗೆ ಭೇಟಿ ನೀಡಿದ್ದ ಎಚ್.ವಿಶ್ವನಾಥ್, ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಪಟ್ಟು ಹಿಡಿದರು. ಆದರೆ, ಈಗ ನಿಮಗೆ ಸ್ಥಾನ ನೀಡುವುದು ಕಷ್ಟ.
ಕಮಲದೊಳಗೆ ಕೆಂಡ: ಮೂಲ ಬಿಜೆಪಿ ಖೋಟಾದಲ್ಲಿ ಅರವಿಂದ ಲಿಂಬಾವಳಿ, ಉಮೇಶ್ ಕತ್ತಿಗಷ್ಟೇ ಸಚಿವ ಸ್ಥಾನ ನೀಡಬೇಡಿ. ಅದೇ ಖೋಟಾದಲ್ಲಿ ನಮ್ಮನ್ನೂ ಸಚಿವರನ್ನಾಗಿ ಮಾಡಿ ಎಂದು ರಾಜು ಗೌಡ, ತಿಪ್ಪಾರೆಡ್ಡಿ, ನಿರಾಣಿ, ಹಾಲಪ್ಪ ಆಚಾರ್, ನೆಹರು ಓಲೇಕರ್, ಬೋಪಯ್ಯ, ರಾಮದಾಸ್, ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವು ಶಾಸಕರು ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಎಲ್ಲ ರಾಜಕೀಯ ಬೆಳವಣಿಗೆಯನ್ನು ಅಳೆದು, ತೂಗಿ ನೋಡುತ್ತಿರುವ ಸಿಎಂ, ಎಲ್ಲ ನಿರ್ಣಯ ತೆಗೆದುಕೊಳ್ಳುವುದನ್ನು ಬುಧವಾರ ರಾತ್ರಿಗೆ ಮೀಸಲಿಟ್ಟಿದ್ದಾರೆ. ಸವಾಲಿನ ಸಮಸ್ಯೆಗಳನ್ನು ಒಂದೊಂದೇ ಬಿಡಿಸಿಕೊಂಡು ಬಂದಿ ರುವ ಯಡಿಯೂರಪ್ಪ, ಸಚಿವ ಸಂಪುಟ ವಿಸ್ತರಣೆ ಕಗ್ಗಂಟನ್ನು ಹೇಗೆ ಬಿಡಿಸುವರು ಎನ್ನುವುದು ಕುತೂಹಲಕಾರಿಯಾಗಿದೆ.