ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಲ್ವರು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆನಂದ್ ಸಿಂಗ್ ಅವರಿಗೆ ಅರಣ್ಯ ಹಾಗೂ ಪರಿಸರ ಖಾತೆ, ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿವರಾಂ ಹೆಬ್ಬಾರ್ಗೆ ಹಿಂದೆ ನೀಡಿದ್ದ ಕಾರ್ಮಿಕ ಖಾತೆಯೊಂದಿಗೆ ಸಕ್ಕರೆ ಖಾತೆ ಹೆಚ್ಚುವರಿಯಾಗಿ ನೀಡಲಾಗಿದೆ. ಸಿಸಿ ಪಾಟೀಲ್ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ನೀಡಿದ್ದಾರೆ.
ಸಚಿವರಿಗೆ ಹಂಚಿಕೆ ಮಾಡಿದ ಖಾತೆಗಳ ಪರಿಷ್ಕೃತ ಪಟ್ಟಿಯನ್ನು ಸಿಎಂ ಯಡಿಯೂರಪ್ಪ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ.
ರಾಜ್ಯಪಾಲರ ಅಂಕಿತ ದೊರೆತ ನಂತರ ಅಧಿಕೃತ ಆದೇಶ ಸಂಜೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ (ದಿಗ್ವಿಜಯ ನ್ಯೂಸ್)