ಬೆಂಗಳೂರು: ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾರನ್ನು ಕಾಂಗ್ರೆಸ್ನಿಂದ ಕಣಕ್ಕಿಳಿಸಲು ಪಕ್ಷದ ಹಿರಿಯ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ನಡುವೆಯೇ ಕುಸುಮಾ ವಿರುದ್ಧ ಡಿ.ಕೆ. ರವಿ ತಾಯಿ ಗೌರಮ್ಮ ವಾಗ್ದಾಳಿ ನಡೆಸಿರುವುದು ಕಾಂಗ್ರೆಸ್ಗೆ ಮುಳುವಾಗಿದೆ.
ಗೌರಮ್ಮ ಸೊಸೆಯ ವಿರುದ್ಧವೇ ಕಿಡಿಕಾರಿದ ಬಳಿಕ ಕುಸುಮಾರನ್ನು ಅಭ್ಯರ್ಥಿ ಮಾಡುವ ಬಗ್ಗೆ ಕಾಂಗ್ರೆಸ್ನಲ್ಲಿ ಅಪಸ್ವರ ಕೇಳಿಬಂದಿದೆ ಎನ್ನಲಾಗಿದೆ. ಕುಸುಮಾರನ್ನು ಅಭ್ಯರ್ಥಿ ಮಾಡಲು ಡಿಕೆ ಬ್ರದರ್ಸ್ ಆಸಕ್ತಿ ತೋರಿದ್ದರು. ಆದರೆ, ಗೌರಮ್ಮ ಅವರ ಮಾತನ್ನು ಚುನಾವಣಾ ಸಮಯದಲ್ಲಿ ಕುಸುಮಾ ವಿರುದ್ಧ ಕಣಕ್ಕೆ ಇಳಿಯುವ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.
ಕುಸುಮಾ ಬದಲು ಬೇರೆ ಅಭ್ಯರ್ಥಿಗೆ ಮಣೆ ಹಾಕುವುದು ಒಳಿತು ಎಂದು ಅನೇಕ ನಾಯಕರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಬಾಲಕೃಷ್ಣ ಮತ್ತು ರಕ್ಷಾ ರಾಮಯ್ಯರಲ್ಲಿ ಒಬ್ಬರಿಗೆ ಅಂತಿಮ ಮಾಡುವುದು ಒಳಿತಂದೆ ಚರ್ಚೆಯಾಗಿದೆ. ಆದರೆ, ಒಂದು ಬಣ ಕುಸುಮ ಪರ ಧ್ವನಿ ಎತ್ತಿದ್ದಾರೆನ್ನಲಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾನುವಾರ ಹಿರಿಯ ನಾಯಕರ ಸಭೆ ಕರೆದಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಹಾಥರಸ್ ಪ್ರಕರಣ: ಯುಪಿ ಪೊಲೀಸರ ದೌರ್ಜನ್ಯ ಬಿಚ್ಚಿಟ್ಟ ಸಂತ್ರಸ್ತೆ ಕುಟುಂಬದ ಸದಸ್ಯರು
ಸಭೆಯಲ್ಲಿ ಆರ್ಆರ್ ನಗರದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ನಾಳೆ ಆರ್ಆರ್ ನಗರ ಅಭ್ಯರ್ಥಿ ಫೈನಲ್ ಮಾಡುವ ಸಾಧ್ಯತೆ ಇದೆ. ಇದೀಗ ಕುಸುಮಾಗೆ ಡಿ.ಕೆ.ರವಿ ತಾಯಿಯ ಅಪಸ್ವರದ ಮಾತು ಅಡ್ಡಿಯಾಗಿದೆ.
ನಾನೇ ಹೋಗಿ ಬೆಂಕಿ ಹಚ್ಚಿಸ್ತೀನಿ
ನಿನ್ನೆ ಸ್ವಗ್ರಾಮ ಕುಣಿಗಲ್ನ ದೊಡ್ಡಕೊಪ್ಪಲಿನಲ್ಲಿ ಮಾತನಾಡಿದ ಗೌರಮ್ಮ, ‘ನನ್ನ ಮಗನ ಹೇಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತ್ಕೋಬೇಕು? ಡಿ.ಕೆ. ರವಿ ಹೆಂಡ್ತಿ ಅನ್ನೋ ಯೋಗ್ಯತೆಯನ್ನು 6 ವರ್ಷದಲ್ಲೇ ಕಳೆದುಕೊಂಡ್ಲು. ನನ್ನ ಮಗನನ್ನು ಅವತ್ತು ಮಣ್ಣಲ್ಲಿ ಬಿಸಾಕಿ ಹೋದವಳು ಇವತ್ತಿನವರೆಗೂ ಬಂದಿಲ್ಲ. ನನ್ನ ಮಗನ ಜೊತೆ ಅವಳೂ ಹೋಗಿ ಬಿಟ್ಲು ಅಂತ ತಿಳಿದುಕೊಂಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.
ನನ್ನ ಮಗನ ದುಡ್ಡಲ್ಲಿ ಒಂದು ರೂಪಾಯಿಯನ್ನೂ ನಮ್ಮ ಕಷ್ಟಕ್ಕೆ ಅವಳು ಕೊಡಲಿಲ್ಲ. ಚುನಾವಣೆಯಲ್ಲಿ ಅವರು ಏನಾದ್ರೂ ಮಾಡಿಕೊಳ್ಳಲಿ. ಆದ್ರೆ ನನ್ನ ಮಗನ ಹೆಸರು ಮತ್ತು ಫೋಟೋ ಹಾಕಿಕೊಂಡು ಚುನಾವಣೆಗೆ ನಿಲ್ಲಬಾರದು. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿಕೊಂಡರೆ ಹುಡುಗರನ್ನು ಕರೆದುಕೊಂಡು ನಾನೇ ಹೋಗಿ ಬೆಂಕಿ ಹಚ್ಚಿಸ್ತೀನಿ ಎಂದು ಗೌರಮ್ಮ ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ