ಬೆಂಗಳೂರು ಎಸ್ಸೆಸ್ಸೆಲ್ಸಿ ಮತ್ತು ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಸಮಾಜ ಕಲ್ಯಾಣ ಇಲಾಖೆಯು ಪರಿಷ್ಕರಿಸಿದೆ.
ಶೇ.60ರಿಂದ 74.99 ಅಂಕ ಪಡೆದಲ್ಲಿ 7 ಸಾವಿರ ರೂ. ಮತ್ತು ಶೇ.75ಕ್ಕಿಂತ ಹೆಚ್ಚಿನ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 15 ಸಾವಿರ ರೂ.ಗಳನ್ನು ಒಂದು ಬಾರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 15 ಸಾವಿರ ದಿಂದ 35 ಸಾವಿರ ರೂ.ಗಳ ವರೆಗೆ ನೀಡಲಾಗುತ್ತಿದೆ.
ಪ್ರೋತ್ಸಾಹ ಧನ ವಿತರಣೆಯಲ್ಲಿ ಯಾವುದೇ ಆದಾಯ ಮಿತಿ ನಿಗದಿ ಮಾಡಬಾರದು ಎಂಬ ನಿಯಮವನ್ನು ವಿಧಿಸಿದೆ. ಆನ್ಲೈನ್ ಮೂಲಕ ಅರ್ಜಿ ಪಡೆದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಯಾರು ಅರ್ಹರಲ್ಲ?
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೊರತುಪಡಿಸಿ ಹೊರ ರಾಜ್ಯದ ಮುಕ್ತ ವಿವಿಗಳಲ್ಲಿ ಉತ್ತೀರ್ಣರಾಗಿದ್ದರೆ ಅರ್ಹತೆ ಇರುವುದಿಲ್ಲ. ಪಿಯುಸಿ ನಂತರ ಐಟಿಐ ವ್ಯಾಸಂಗ ಮಾಡಿದ್ದರೆ ಅವರು ಅರ್ಹತೆ ಹೊಂದಿರುವುದಿಲ್ಲ.
ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು. ಯಾವುದೇ ಪ್ರಾಕೃತಿಕ ವಿಕೋಪ, ಇನ್ನಿತರೆ ಅನಿಯಂತ್ರಿತ ಕಾರಣಗಳಿಂದಾಗಿ ಪರೀಕ್ಷೆ ರದ್ದುಪಡಿಸಿ ಕೇವಲ ತರಗತಿ ಅಂಕಗಳ ಆಧಾರದ ಮೇಲೆ ಅಂತಿಮ ವರ್ಷದಲ್ಲಿ ತೇರ್ಗಡೆಯಾಗಿದ್ದರೆ ಅಂತಹ ವಿದ್ಯಾರ್ಥಿಗಳು ಪ್ರೋತ್ಸಾಹ ಧನಕ್ಕೆ ಅರ್ಹತೆ ಪಡೆದಿರುವುದಿಲ್ಲ. ಜ್ಯೇಷ್ಠತೆ ಆಧಾರದಲ್ಲಿ ಪ್ರೋತ್ಸಾಹ ಧನ ವಿತರಣೆ ಮಂಜೂರು ಮಾಡುವಂತೆ ತಿಳಿಸಲಾಗಿದೆ.
ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು 15 ದಿನದೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಜಾತಿ/ಆದಾಯ ಪ್ರಮಾಣ ಪತ್ರ, ಆಧಾರ್ ಮಾಹಿತಿಯನ್ನು ದೃಢೀಕರಿಸಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಕಳುಹಿಸುವಂತೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.