ಲಂಡನ್: ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರು ಆಯುರ್ವೇದ ಔಷಧಿಯಿಂದ ಕರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬುದನ್ನು ಬ್ರಿಟನ್ ಅಲ್ಲಗಳೆದಿದೆ.
ಚಾರ್ಲ್ಸ್ ಅವರು ಕರೊನಾ ವೈರಸ್ ಸೋಂಕಿಗೆ ಬೆಂಗಳೂರಿನ ಆಯುರ್ವೇದ ಚಿಕಿತ್ಸೆ ಪಡೆದಿಲ್ಲ. ಬದಲಿಗೆ ಬ್ರಿಟನ್ ಸರ್ಕಾರದ ರಾಷ್ಟ್ರೀಯ ಆರೋಗ್ಯ ಸೇವೆಯ ವೈದ್ಯಕೀಯ ಸಲಹೆ ಹಾಗೂ ಔಷಧಿ ಪಡೆದಿದ್ದಾರೆ ಎಂದು ಲಂಡನ್ನ ಪ್ರಿನ್ಸ್ ಆಫ್ ವೇಲ್ಸ್ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಗೋವಾದ ಸಂಸದ ಶ್ರೀಪಾದ್ ನಾಯಕ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಕರೊನಾ ವೈರಸ್ಗೆ ಬೆಂಗಳೂರಿನ ಅಯುರ್ವೇದ ರೆಸಾರ್ಟ್ ನಡೆಸುತ್ತಿರುವ ಡಾ. ಐಸಾಕ್ ಮಥಾಯ್ ಅವರಲ್ಲಿ ಚಿಕಿತ್ಸೆ ಪಡೆದು ವೈರಸ್ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಇದನ್ನು ರಾಜಮನೆತನದ ವಕ್ತಾರರು ನಿರಾಕರಿಸಿದ್ದಾರೆ.
ಈ ಬಗ್ಗೆ ಆಯುರ್ವೇದ ರೆಸಾರ್ಟ್ನ ಡಾ. ಐಸಾಕ್ ಮಥಾಯ್ ಅವರು ಮಾತನಾಡಿ, ರಾಜ ಮತ್ತು ಆತನ ಪತ್ನಿ ನನ್ನ ರೋಗಿಗಳು. ಆದರೆ ಅವರಿಗೆ ಇದ್ದ ರೋಗ ಯಾವುದು. ಅದಕ್ಕೆ ನೀಡಿದ ಔಷಧಿ ಯಾವುದು ಎಂದು ನಾನು ದೃಢಪಡಿಸುವುದಿಲ್ಲ. ನಾನು ಬಹಿರಂಗ ಪಡಿಸಿದರೆ ರೋಗಿಗಳ ಗೌಪ್ಯತೆ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಹೀಗಾಗಿ ನಾನು ಏನು ಹೇಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾನು ಕರೊನಾ ವೈರಸ್ ಸೋಂಕಿಗೆ ಯಾವುದೇ ರೀತಿಯ ಔಷಧಿಯನ್ನು ನೀಡುತ್ತಿಲ್ಲ. ವೈರಾಣು ಜ್ವರ ಎಂದು ಬಂದವರಿಗೆ ಮಾತ್ರ ಔಷಧಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಾರ್ಚ್ನಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರು ಚಿಕಿತ್ಸೆ ಪಡೆದು ಗುಣಮುಖರಾದರು. ಮತ್ತೊಮ್ಮೆ ಅವರ ಕಫ ಹಾಗೂ ರಕ್ತವನ್ನು ಪರೀಕ್ಷೆ ಮಾಡಲಾಗಿದೆ. ಈಗ ಅವರು ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. (ಏಜೆನ್ಸೀಸ್)
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕೆಂದೇ ಕರೊನಾ ಅಂಟಿಸಿಕೊಂಡು ಪರಿತಪಿಸಿದ ಜರ್ಮನಿಯ ಮೇಯರ್