ಕಲಬುರಗಿ: ಮಕ್ಕಳೊಂದಿಗೆ ಆಟವಾಡುತ್ತ ಓದಿಕೊಂಡಿರಬೇಕಾದ 15ರ ಬಾಲಕನಿಗೆ ಬೆಳೆದದ್ದು ವಿಡಿಯೋ ಗೇಮ್ ನಂಟು. ಅದೂ ಎಷ್ಟರ ಮಟ್ಟಿಗೆ ಅಂದ್ರೆ ಆ ವಿಡಿಯೋ ಗೇಮ್ಗಾಗಿಯೇ ತನ್ನ ಪ್ರಾಣ ಕಳೆದುಕೊಳ್ಳುವಷ್ಟು.
ಬ್ರಹ್ಮಪುರ ಬಡಾವಣೆಯ 9ನೇ ತರಗತಿ ವಿದ್ಯಾರ್ಥಿ ರಾಹುಲ್ ಸೊಲ್ಲಾಪುರ ಎಂಬಾತ ಯಾವಾಗಲೂ ಮೊಬೈಲ್ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಕಳೆದ ಒಂದೆರಡು ವರ್ಷಗಳಿಂದ ವಿಡಿಯೋ ಗೇಮ್ನಲ್ಲೇ ಮಗ್ನವಾಗಿರುತ್ತಿದ್ದ ಬಾಲಕನಿಗೆ ಪೋಷಕರು ಹಲವು ಬಾರಿ ಬುದ್ಧಿ ಹೇಳಿದ್ದರು. ಆ ವೇಳೆ ತಂದೆ-ತಾಯಿ ಜತೆ ವಾದಕ್ಕೂ ಇಳಿಯುತ್ತಿದ್ದ ರಾಹುಲ್, ಇಂದು (ಶುಕ್ರವಾರ) ಬೆಳಗಿನ ಜಾವ ಹೆಣವಾಗಿದ್ದಾನೆ. ಸಾವಿಗೂ ಮುನ್ನಾ ದಿನ ಮನೆಯಲ್ಲಿ ನಡೆದಿದ್ದಾರೂ ಏನು ಗೊತ್ತಾ? ಇದನ್ನೂ ಓದಿರಿ ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ
ನಿನ್ನೆ(ಗುರುವಾರ) ಸಂಜೆಯೂ ರಾಹುಲ್ ವಿಡಿಯೋ ಗೇಮ್ ಆಡುತ್ತಿದ್ದ. ಇದನ್ನು ಗಮನಿಸಿದ ಪಾಲಕರು ಮಗನಿಗೆ ಬೈದು ಬುದ್ಧಿ ಹೇಳಿದ್ದರು. ಇದರಿಂದಾಗಿ ನೊಂದುಕೊಂಡ ಆತ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಪಾಲಕರು ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ರೋದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಎಸಿಪಿ ಕಿಶೋರಬಾಬು, ಇನ್ಸ್ಪೆಕ್ಟರ್ ಅರುಣಕುಮಾರ ಮುರಗೊಂಡಿ ಮತ್ತು ಸಿಬ್ಬಂದಿ, ಮರಣೋತ್ತರ ಪರೀಕ್ಷೆ ಬಳಿಕ ಪಾಲಕರಿಗೆ ಶವ ಹಸ್ತಾಂತರಿಸಿದರು. ಕರೊನಾ ಪರೀಕ್ಷೆಗಾಗಿ ಗಂಟಲ ದ್ರವ ಸಹ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಲಾಗಿದೆ. ರಾಘವೇಂದ್ರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ರಾಹುಲ್, 9ನೇ ತರಗತಿ ಪಾಸಾಗಿ 10ನೇ ತರಗತಿಗೆ ಪ್ರವೇಶ ಪಡೆಯಬೇಕಿತ್ತು. ಅಷ್ಟರಲ್ಲಿ ಬದುಕನ್ನೇ ದುರಂತ ಅಂತ್ಯವಾಗಿಸಿಕೊಂಡಿದ್ದಾನೆ.