More

    ಕುಡಿಯುವ ನೀರಿಗಾಗಿ ಬೋರ್‌ವೆಲ್​ ಮೊರೆ: ಬಿಬಿಎಂಪಿ-ಜಲಮಂಡಳಿ ಸಮನ್ವಯ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಸಮಸ್ಯಾತ್ಮಕ ಪ್ರದೇಶಗಳಲ್ಲಿ ತಕ್ಷಣವೇ ಬೋರ್‌ವೆಲ್‌ಗಳನ್ನು ಕೊರೆಯಿಸಬೇಕು. ಯಾವುದೇ ವಾರ್ಡ್‌ಗಳಲ್ಲಿ ನಾಗರಿಕರಿಗೆ ತೊಂದರೆ ಉಂಟಾಗದಂತೆ ಪಾಲಿಕೆ ಹಾಗೂ ಜಲಮಂಡಳಿ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಎರಡೂ ಸಂಸ್ಥೆಗಳ ಅಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸೂಚಿಸಿದ್ದಾರೆ.

    ಪಾಲಿಕೆ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಪೂರೈಸುವ ಕಾರ್ಯಕ್ರಮಕ್ಕೆ ಯಾವುದೇ ಹಣಕಾಸಿನ ಅಡ್ಡಿ ಇಲ್ಲ. ಹೀಗಾಗಿ ಸಬೂಬು ಹೇಳದೆ ಎಲ್ಲ ವಲಯ ಆಯುಕ್ತರು ಸ್ಥಳೀಯ ಮಾಹಿತಿಯನ್ನು ಒದಗಿಸಿದರೆ ತಕ್ಷಣವೇ ಅದಕ್ಕೆ ಅನುಮೋದನೆ ನೀಡಲಾಗುವುದು. ಮುಖ್ಯವಾಗಿ 110 ಹಳ್ಳಿಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಜಲಮಂಡಳಿಯ ಅಧಿಕಾರಿ/ಸಿಬ್ಬಂದಿಗಳನ್ನು ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    131 ಕೋಟಿ ರೂ. ಅನುದಾನವನ್ನು ಹಂಚಿಕೆ:

    ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಮಹದೇವಪುರ, ಬೊಮ್ಮನಹಳ್ಳಿ, ಆರ್.ಆರ್.ನಗರ, ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಿಗೆ (110 ಹಳ್ಳಿಗಳು ಸೇರಿ) ಬೋರ್‌ವೆಲ್‌ಗಳನ್ನು ಕೊರೆಯಲು 131 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಹಣವನ್ನು ಬಳಸಿಕೊಂಡು ಬೇಗನೆ ಅವಶ್ಯಕತೆಯಿರುವ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಬೇಕು. ಹೆಚ್ಚು ಸಮಸ್ಯೆಯಿರುವ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಕೆಟ್ಟಿರುವ ಬೋರ್‌ವೆಲ್‌ಗಳು ಹಾಗೂ ಆರ್.ಒ ಪ್ಲಾಂಟ್‌ಗಳನ್ನು ದುರಸ್ತಿಗೊಳಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

    ನಗರದಲ್ಲಿ 58 ಕಡೆ ನೀರಿನ ಸಮಸ್ಯೆಯಿದ್ದು, ಮಹದೇವಪುರ 16, ಆರ್.ಆರ್.ನಗರ 25, ಬೊಮ್ಮನಹಲ್ಳಿ 5 ಕಡೆ, ಯಲಹಂಕ ಹಾಗೂ ದಾಸರಹಳ್ಳಿ ತಲಾ 3 ಕಡೆ ನೀರಿನ ಅಭಾವ ಹೆಚ್ಚಿದ್ದು, ಈ ಸಂಬಂಧ ಕೂಡಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಿ ಬೋರ್‌ವೆಲ್‌ಗಳನ್ನು ಕೊರೆದು ನೀರಿನ ಅಭಾವವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

    5ನೇ ಹಂತ ಏಪ್ರಿಲ್ ಅಂತ್ಯಕ್ಕೆ ಪೂರ್ಣ:

    ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ನಗರದಲ್ಲಿ ಸಂಸ್ಥೆಯ ವತಿಯಿಂದ 10.84 ಲಕ್ಷ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 10,955 ಕೊಳವೆಬಾವಿಗಳ ಪೈಕಿ 1,214 ಕೊಳವೆಬಾವಿಗಳು ಬತ್ತಿದ್ದು, 3700ರಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇವುಗಳಲ್ಲಿ ಸರಿಪಡಿಸಬಹುದಾದ ಕೊಳವೆಬಾವಿಗಳನ್ನು ಗುರುತಿಸಿ ಫ್ಲಷಿಂಗ್ ಹಾಗೂ ರೀಡ್ರಿಲ್ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.

    ಈಗಾಗಲೇ ನೀರಿನ ಸಮಸ್ಯೆ ಹೆಚ್ಚಿರುವ 257 ಸ್ಥಳಗಳನ್ನು ಗುರುತಿಸಿದ್ದು, ಅಲ್ಲೆಲ್ಲ ನೀರು ಪೂರೈಸಲು 68 ಟ್ಯಾಂಕರ್‌ಗಳ ಜತೆಗೆ ಹೊಸದಾಗಿ 18 ಟ್ಯಾಂಕರ್‌ಗಳನ್ನು ಖರೀದಿಸಲಾಗುವುದು. 200 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಕಾವೇರಿ 5ನೇ ಹಂತ ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

    ಸಿಂಟೆಕ್ಸ್ ಟ್ಯಾಂಕ್ ಮೂಲಕ ನೀರಿನ ವ್ಯವಸ್ಥೆ:
    ಆರ್.ಆರ್.ನಗರ ವಲಯದಲ್ಲಿ ಈಗಾಗಲೇ ಪ್ರಮುಖ ಸ್ಥಳದಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಎಲ್ಲ ವಲಯಗಳಲ್ಲಿಯೂ ಪ್ರಮುಖ ಸ್ಥಳ, ಕೊಳಗೇರಿ ಪ್ರದೇಶ ಸೇರಿ ಇನ್ನಿತರ ಸ್ಥಳಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಲಾಗುವುದು.

    110 ಹಳ್ಳಿಗಳಲ್ಲಿ ನೀರಿ ಸಮಸ್ಯೆಗೆ ಸಮಗ್ರ ವ್ಯವಸ್ಥೆ:

    ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಇಲ್ಲೆಲ್ಲ ಹೆಚ್ಚು ಒತ್ತು ನೀಡಿ ಸಮಸ್ಯೆ ಬಗೆಹರಿಸಬೇಕು. ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಂಡು ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. 110 ಹಳ್ಳಿಗಳಿಗೆ ಜಲಮಂಡಳಿಯಿಂದ 40,000 ಸಂಪರ್ಕ ನೀಡಲಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಜಲಮಂಡಳಿಯ ಅಧಿಕಾರಿ/ಸಿಬ್ಬಂದಿ ಪಾಲಿಕೆ ವಲಯ ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸಲು ರಾಕೇಶ್ ಸಿಂಗ್ ಸೂಚಿಸಿದ್ದಾರೆ.

    ಬೆಂಗಳೂರಿಗೆ ವಾರ್ಷಿಕ 19 ಟಿಎಂಸಿ ನೀರನ್ನು ಹಂಚಿಕೆ ಮಾಡಿದ್ದು, ಪ್ರತಿನಿತ್ಯ ಸುಮಾರು 1,472 ಎಂಎಲ್ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿಯಿಂದ ಜುಲೈ ತಿಂಗಳವರೆಗೆ 9.48 ಟಿಎಂಸಿ ನೀರು ಅವಶ್ಯಕತೆಯಿದೆ. ಇಷ್ಟೂ ನೀರು ಕೆಆರ್‌ಎಸ್‌ನಿಂದ ಸಿಗಲಿದ್ದು, ಜನತೆ ಆತಂಕ ಪಡುವ ಅಗತ್ಯ ಇಲ್ಲ.
    – ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts