ಮೈಸೂರು: ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಬಿಜೆಪಿ ಒತ್ತು ನೀಡುತ್ತದೆ. ಕಾಂಗ್ರೆಸ್ ಪಕ್ಷದಂತೆ ಪುಕ್ಕಟ್ಟೆ ಭಾಗ್ಯಗಳನ್ನು ನೀಡಿ, ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ಹೋಗುವುದಿಲ್ಲ ಎಂದು ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಹೇಳಿದರು.
ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ಕುವೆಂಪು ನಗರದ ಬಂದಂತಮ್ಮ ಮತ್ತು ಕಾಳಮ್ಮ ದೇವಸ್ಥಾನದಲ್ಲಿ ನಾರಿ ಶಕ್ತಿ ಕಾರ್ಯಕ್ರಮದ ಅಂಗವಾಗಿ ಶಕ್ತಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ನಾವು ಶಕ್ತಿ ಆರಾಧಕರು, ಮತ್ತೊಮ್ಮೆ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಬೇಕು ಎಂದರು.
ಬಿಜೆಪಿಯು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಯರಿಗೂ ಸ್ಪರ್ಧಿಸುವ ಅವಕಾಶ ಕಲ್ಪಿಸಿದೆ. ಪಕ್ಷದ ಹುದ್ದೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ ಜನರು ಮಾರು ಹೋಗದಂತೆ ಜಾಗೃತಿ ಮೂಡಿಸಬೇಕಿದೆ. ದೇಶದ ಸುಭದ್ರತೆ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆಗೆ ಬಿಜೆಪಿಗೆ ಮತ ನೀಡುವಂತೆ ಜನರನ್ನು ಮನವೊಲಿಸಬೇಕು ಎಂದು ಹೇಳಿದರು.