ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಶನಿವಾರ (ಏ.20) ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿದ್ದು, ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ ೧ ರಿಂದ ರಾತ್ರಿ ೭ ಗಂಟೆವರೆಗೆ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಅಲ್ಲದೇ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಪ್ಯಾಲೇಸ್ ರಸ್ತೆ, ಎಂ.ವಿ.ಜಯರಾಮ್ ರಸ್ತೆ, ವಸಂತನಗರ ರಸ್ತೆ, ಜಯಮಹಲ್ ರಸ್ತೆ, ಸಿ.ವಿ.ರಾಮನ್ ರಸ್ತೆ, ಬಳ್ಳಾರಿ ರಸ್ತೆ, ರಮಣಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜು ರಸ್ತೆ, ಮೇಖ್ರಿ ವೃತ್ತದಿಂದ ಯಶವಂತಪುರದವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ.
ಸರಕು ಸಾಗಣೆ ವಾಹನ ನಿಷೇಧ:
ಮಧ್ಯಾಹ್ನ ೧೨ ರಿಂದ ರಾತ್ರಿ ೯ರ ವರೆಗೆ ಸಿಎಂಟಿಐ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಬಸವೇಶ್ವರ ಸರ್ಕಲ್, ಉದಯ ಟಿವಿ ಹಳೇ ಕಚೇರಿ ಜಂಕ್ಷನ್, ಹಜ್ ಕ್ಯಾಂಪ್ ನಂದಿದುರ್ಗ ರಸ್ತೆ, ಯಶವಂತಪುರ ಗೋವರ್ಧನ್ ಮೂಲಕ ನಗರದ ಒಳಕ್ಕೆ ಭಾರೀ ವಾಹನಗಳು ನಗರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.