ಮುಳಬಾಗಿಲು: ನರೇಂದ್ರ ಮೋದಿ ಸರ್ಕಾರ ಉತ್ತಮ ಜನಪರ ಆಡಳಿತದ ಜತೆಗೆ ಸಮಾಜಕ್ಕೆ ಪ್ರತಿಭಾವಂತರು ಅತ್ಯವಶ್ಯಕ ಎಂಬುದಕ್ಕೆ ಒತ್ತು ನೀಡಿ ಅವರನ್ನು ಗೌರವದಿಂದ ಕಾಣುತ್ತಿದೆ. ಆದ್ದರಿಂದ ಪದವೀಧರ ಕ್ಷೇತ್ರದ ಮತದಾರರು ಬಿಜೆಪಿಗೆ ಮತ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮನವಿ ಮಾಡಿದರು.
ನಗರದ ಪೂಲ್ಚಂದ್ ಜೈನ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಜ್ಞಾನಿಗಳ ಅವಶ್ಯಕತೆಯಿದೆ. ಪದವೀಧರರು ಈ ನಿಟ್ಟಿನಲ್ಲಿ ಸಮಾಜಕಟ್ಟುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ.ಗೌಡ ಶಿರಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿ ಪ್ರತಿಭಾವಂತರಿಗೆ ಉತ್ತೇಜನ ನೀಡುತ್ತಿದ್ದು ಇಂತಹ ಅಭ್ಯರ್ಥಿಗೆ ಮತ ನೀಡಿ ಇನ್ನಷ್ಟು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಶಾಸಕ ವೈ.ಎ.ನಾರಾಯಣಸ್ವಾಮಿ ಅಭಿಮಾನಿ ಬಳಗದ ಮುಖಂಡ ನಿವೃತ್ತ ಶಿಕ್ಷಕ ಕೆಂಬೋಡಿ ಎಂ.ನಾಗರಾಜ್, ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಸ್.ಮುನಿವೆಂಕಟಪ್ಪ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ಪಿ.ವೆಂಕಟೇಶಪ್ಪ, ನಿರ್ದೇಶಕ ಹೈದ್ಲಾಪುರ ಜಯರಾಮರೆಡ್ಡಿ, ಭೂ ಮಂಜೂರಾತಿ ಸಮಿತಿ ಸದಸ್ಯ ಆರ್.ಪೆದ್ದಪ್ಪಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ಜಿ.ಎಸ್.ಜಗದೀಶ್ ಇದ್ದರು.
ಅಂತರ ಕಾಯ್ದುಕೊಂಡ ಬಿಜೆಪಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ ಸಭೆಗೆ ಆಗಮಿಸಲಿದ್ದು, ಬಿಜೆಪಿಯಿಂದ ಪ್ರಚಾರ ಸಭೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಲಾಗಿತ್ತಾದರೂ ಸಚಿವರು ಮಾತ್ರ ಸಭೆಗೆ ಆಗಮಿಸಿದ್ದು ಅವರೊಂದಿಗೆ ಬಿಜೆಪಿಯ ಕೆಲವು ಮುಖಂಡರನ್ನು ಹೊರತುಪಡಿಸಿ ಬಿಜೆಪಿ ತಾಲೂಕು ಮತ್ತು ನಗರ ಘಟಕದ ಪದಾಧಿಕಾರಿಗಳು ಸಭೆಗೆ ಬಾರದೆ ಅಂತರ ಕಾಯ್ದುಕೊಂಡಿದ್ದರು. ಸಭೆ ಮುಕ್ತಾಯದ ನಂತರ ಬಿಜೆಪಿ ಉಸ್ತುವಾರಿ ಕಾಂತರಾಜ್, ರಾಜ್ಯ ಕಾರ್ಯಾಲಯ ಉಸ್ತುವಾರಿ ಕೇಶವಪ್ರಸಾದ್ ಆಗಮಿಸಿ ಮಾಹಿತಿ ಸಂಗ್ರಹಿಸಿದರು.