ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು ಮತ್ತೊಮ್ಮೆ ಬಂಧಿಸಿದ್ದಾರೆ.
ಯೂನೋಕಾಯಿನ್ ಟೆಕ್ನಾಲಜೀಸ್ ಪ್ರೈ.ಲಿ.ಗೆ ಸೇರಿದ ಬಿಟ್ ಕಾಯಿನ್ ಕನ್ನ ಪ್ರಕರಣ ಸಂಬಂಧ ತುಮಕೂರು ನ್ಯೂ ಎಕ್ಸ್ಟೆನ್ಷನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಗೈರಾದ ಹಿನ್ನೆಲೆಯಲ್ಲಿ ಶ್ರೀಕಿಯನ್ನು ಬಂಧಿಸಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ತುಮಕೂರಿನ ಜಯನಗರ ನಿವಾಸಿ ಬಿ.ವಿ. ಹರೀಶ್, 2017ರಲ್ಲಿ ರಾಜಾಜಿನಗರ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಯೂನೊಕಾಯಿನ್ ಟೆಕ್ನಾಲಜಿಸ್ ಪ್ರೈ.ಲಿ. ಕಂಪನಿ ತೆರೆದು ಡಿಜಿಟಲ್ ಕರೆನ್ಸಿ (ಕ್ರಿಪ್ಟೊ ಕರೆನ್ಸಿ) ವ್ಯವಹಾರ ನಡೆಸುತ್ತಿದ್ದರು. ಇದರ ನಡುವೆ ಕಚೇರಿ ಕಂಪ್ಯೂಟರ್ನಲ್ಲಿ ಡಾಟಾ ಬೇಸ್ ಹ್ಯಾಕ್ ಮಾಡಿ ವ್ಯಾಲೆಟ್ನಿಂದ 60.6 ಬಿಟ್ ಕಾಯಿನ್ ಅನ್ನು ಕಿಡಿಗೇಡಿಗಳು ದೋಚಿದ್ದರು. ಇದರ ಮೌಲ್ಯ 1 ಬಿಟ್ ಕಾಯಿನ್ಗೆ 1.67 ಲಕ್ಷ ರೂ.ಗಳಂತೆ 1.14 ಕೋಟಿ ರೂ. ಆಗಿತ್ತು. ಈ ಬಗ್ಗೆ 2017ರ ಜೂನ್ನಲ್ಲಿ ತುಮಕೂರಿನ ನ್ಯೂ ಎಕ್ಸ್ಟೆನ್ಷನ್ ಠಾಣೆಗೆ ಹರೀಶ್, ದೂರು ಸಲ್ಲಿಸಿದ್ದರು. ಇದೇ ಹರೀಶ್, ಆರ್ಬಿಐಯಿಂದ ಕ್ರಿಪ್ಟೋ ಕರೆನ್ಸಿಗೆ ಅನುಮತಿ ಸಿಗಲಿದೆ ಎಂಬ ಭರವಸೆಯಲ್ಲಿ ಹಳೇ ವಿಮಾನ ನಿಲ್ದಾಣ ರಸ್ತೆಯ ಕೆಂಪ್ೆರ್ಟ್ ಮಾಲ್ನಲ್ಲಿ ಕ್ರಿಪ್ಟೋ ಕರೆಸ್ಸಿ ಎಟಿಎಂ ತೆರೆದಿದ್ದರು. ಇದು ದೇಶದಲ್ಲಿ ಮೊದಲ ಬಿಟ್ಕಾಯಿನ್ ಎಟಿಎಂ ಎನ್ನಲಾಗಿತ್ತು. ಕಾನೂನು ಬಾಹಿರ ಎಂದು ಸಿಸಿಬಿ ಅಧಿಕಾರಿಗಳು ಎಟಿಎಂ ಜಪ್ತಿ ಮಾಡಿ ಹರೀಶ್ ವಿರುದ್ಧ ಕೇಸ್ ದಾಖಲಿಸಿದ್ದರು. ಈ ಎಲ್ಲ ಪ್ರಕರಣಗಳ ತನಿಖೆಯನ್ನು 2023ರ ಜುಲೈ 18ರಂದು ಎಸ್ಐಟಿಗೆ ಸರ್ಕಾರ ವಹಿಸಿತ್ತು.
ಎಸ್ಐಟಿ ತನಿಖೆ ವೇಳೆ ಶ್ರೀಕಿ ಬಳಿ ಜಪ್ತಿ ಮಾಡಿದ್ದ ಲ್ಯಾಪ್ಟಾಪ್ ಅನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿವೆ. ತನಿಖಾ ಸಂಸ್ಥೆಗೆ ದೊರೆಯಬಾರದು ಎಂಬ ಉದ್ದೇಶದಿಂದ ಮರೆಮಾಚಿ, ಅಡಗಿಸಿಟ್ಟಿದ್ದ ಕ್ರಿಪ್ಟೋ ಅಡ್ರೆಸ್ಗಳನ್ನು ಪತ್ತೆ ಮಾಡಿ ಪ್ರಕರಣವನ್ನು ಭೇಧಿಸುವಲ್ಲಿ ಎಸ್ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ ಬಳ್ಳಾರಿ ರಸ್ತೆಯ ೆರ್ ಸೀಸನ್ ಹೋಟೆಲ್ನಲ್ಲಿ ಶ್ರೀಕಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪವೇನು?
ಡಿಜಿಟಲ್ ಸಾಕ್ಷಾೃಧಾರಗಳಿಂದ ಆರೋಪಿ ಯೂನೋಕಾಯಿನ್ ಟೆಕ್ನಾಲಜೀಸ್ ಪ್ರೈ.ಲಿ. ಹೆಸರಿನ ಬಿಟ್ ಕಾಯಿನ್ ಎಕ್ಸ್ಚೇಂಜ್ನ ಡಾಟಾ ಬೇಸ್ ಹ್ಯಾಕ್ ಮಾಡಿ ಅದರಲ್ಲಿನ 60.6 ಬಿಟ್ ಕಾಯಿನ್ಗಳನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ದೃಢವಾಗಿದೆ.