ಯಲ್ಲಾಪುರ: ತಾಲೂಕಿನ ಅಲ್ಕೇರಿ ಗೌಳಿವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಹುಟ್ಟುಹಬ್ಬವನ್ನು ಪರಿಸರ ಪ್ರೀತಿಯ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
ವನಮಹೋತ್ಸವದ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳನ್ನು ಉಳಿಸಿ, ಬೆಳೆಸಲು ಶಿಕ್ಷಕರಾದ ಗಂಗಾಧರ ಲಮಾಣಿ, ಶೋಭಾ ಗುನಗಿ, ವಾಣಿ ನಾಯ್ಕ ಅವರು ಶಾಲೆಯಲ್ಲಿ ಹೊಸ ಆಲೋಚನೆಯನ್ನು ಹುಟ್ಟು ಹಾಕಿದ್ದು, ‘ನನ್ನ ಗಿಡ ನನ್ನ ಉಸಿರು’ ಎಂಬ ಶೀರ್ಷಿಕೆಯಡಿ ಪ್ರತಿ ಮಗುವಿಗೆ ಒಂದೊಂದು ಗಿಡವನ್ನು ದತ್ತು ನೀಡಿದ್ದಾರೆ.
ಮಕ್ಕಳು ತಮಗೆ ನೀಡಿದ ಗಿಡಗಳಿಗೆ ವರ್ಷ ಪೂರ್ತಿ ನೀರು ಗೊಬ್ಬರ ಹಾಕುವುದಲ್ಲದೇ, ತಮ್ಮ ಹುಟ್ಟುಹಬ್ಬವನ್ನು ತಮ್ಮ ತಮ್ಮ ಗಿಡ ಬಳಿಯಲ್ಲಿಯೇ ಬಂದು ಆಚರಿಸಿಕೊಳ್ಳುತ್ತಾರೆ.
ಹುಟ್ಟುಹಬ್ಬದ ದಿನದಂದು ತಾವು ದತ್ತು ಪಡೆದ ಗಿಡಗಳ ಸುತ್ತಲು ಸ್ವಚ್ಛಗೊಳಿಸಿ, ಅವುಗಳಿಗೆ ನೀರು, ಗೊಬ್ಬರ ಹಾಕಿ ತಾವು ತಂದ ಕೇಕನ್ನು ಕತ್ತರಿಸುತ್ತಾರೆ. ನಂತರ ಎಲ್ಲ ಮಕ್ಕಳು ಗಿಡ ರಕ್ಷಣೆಗೆ ಪ್ರಮಾಣ ವಚನ ಮಾಡುತ್ತಾರೆ.
ಕೇವಲ ಸಿಹಿ ಹಂಚಿ, ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುವುದಕ್ಕಿಂದ ಈ ರೀತಿಯ ಹುಟ್ಟುಹಬ್ಬದ ಆಚರಣೆ ಮೂಲಕ ಅಲ್ಕೇರಿ ಗೌಳಿವಾಡ ಶಾಲೆ ಮಾದರಿಯಾಗಿದೆ.