More

    ಮೈಸೂರಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಬೈಕ್ ರ‌್ಯಾಲಿ

    ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಮಹತ್ವ, ಅರಿವು ಮೂಡಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ಪೀಪ್ ಸಮಿತಿಯಿಂದ ನಗರದಲ್ಲಿ ಬುಧವಾರ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.
    ನಗರದ ಗನ್‌ಹೌಸ್ ವೃತ್ತದಿಂದ ಆರಂಭಗೊಂಡ ಬೈಕ್ ರ‌್ಯಾಲಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಅದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿ ಮಾತನಾಡಿ, ಭಾರತೀಯ ಚುನಾವಣಾ ಆಯೋಗವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ರತಿಯೊಬ್ಬ ಮತದಾರರು ಅದರಲ್ಲೂ ಯುವ ಮತದಾರರ ಗಮನ ಸೆಳೆಯಬೇಕಿದೆ ಎಂದರು.
    ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ. ರ‌್ಯಾಲಿಯ ಮೂಲಕ ಜನರ ಗಮನ ಸೆಳೆದು ಹೆಚ್ಚು ಮತದಾನ ಅಗುವಂತೆ ಮಾಡುವ ಉದ್ದೇಶ ಇದಾಗಿದೆ ಎಂದರು.
    ಚುನಾವಣೆಯಲ್ಲಿ ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು. ಪ್ರಸ್ತುತ ಯುವಜನರು ಮತದಾನ ಎಂದರೆ ಹಿಂಜರಿಯುವುದುಂಟು. ಹಾಗಾಗಿ, ಅವರಿಗೆ ಮತದಾನದ ಮಹತ್ವವನ್ನು ತಿಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಚುನಾವಣೆಯನ್ನು ಯಶಸ್ವಿ ಮಾಡಬೇಕು ಎಂದರು.
    ಚುನಾವಣಾ ಅಕ್ರಮಗಳನ್ನು ತಡೆಯುವುದು ಕೇವಲ ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಪ್ರತಿಯೊಬ್ಬ ನಾಗರಿಕ ನಮ್ಮೊಂದಿಗೆ ಕೈಜೋಡಿಸಿ ಚುನಾವಣಾ ಅಕ್ರಮಗಳು ಕಂಡುಬಂದರೆ ಸಿ-ವಿಜಿಲ್ ಆ್ಯಪ್‌ನಲ್ಲಿ ವಿಡಿಯೋ, ಆಡಿಯೋ, ಫೋಟೋ ಹಾಗೂ ಜಿಪಿಎಸ್ ಮೂಲಕ ಮಾಹಿತಿಯನ್ನು ನೀಡಿ ಅಕ್ರಮವನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಹೇಳಿದರು.
    ನಗರ ಪೊಲೀಸ್ ಕಮಿಷನರ್ ಬಿ.ರಮೇಶ್, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ ಗಾಯತ್ರಿ, ಎಸ್ಪಿ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತೆ ಡಾ. ಎನ್.ಎನ್.ಮಧು ಇತರರು ಇದ್ದರು.
    ಗನ್‌ಹೌಸ್ ವೃತ್ತದಿಂದ ಆರಂಭಗೊಂಡ ರ‌್ಯಾಲಿ ಬಸವೇಶ್ವರ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಎಲ್‌ಐಸಿ ವೃತ್ತ, ಟಿಪ್ಪು ವೃತ್ತ, ಫೌಂಟೇನ್ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಹದೇವಪುರ ರಸ್ತೆ, ಸಾತಗಳ್ಳಿ ವಾಲ್ಮೀಕಿ ವೃತ್ತ, ರಿಂಗ್ ರೋಡ್ ಮೂಲಕ ಸಾಗಿ ಮೈಸೂರು-ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿಯ ಕೆಂಪೇಗೌಡ ಸರ್ಕಲ್‌ನಲ್ಲಿ ಅಂತ್ಯಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts