ಬೆಂಗಳೂರು: ಆರ್ಎಂಸಿ ಯಾರ್ಡ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬಿಹಾರ ಮೂಲದ ಸಜ್ಜನ್ ಸಿಂಗ್ (33) ಮೃತ ಕಾರ್ಮಿಕ. ಈ ಸಂಬಂಧ ದಂಪತಿಯನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ನೌಕರಿ ಬಯಸಿ ನಗರಕ್ಕೆ ಬಂದಿದ್ದ ಸಜ್ಜನ್ ಸಿಂಗ್, ಆರ್ಎಂಸಿ ಯಾರ್ಡ್ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸೋಮವಾರ ಬೆಳಗ್ಗೆ 7 ಗಂಟೆಯಲ್ಲಿ ಸೋಮೇಶ್ವರನಗರದ ಗಲ್ಲಿಯೊಂದರಲ್ಲಿ ಸಜ್ಜನ್ ಸಿಂಗ್ ಶವ ಪತ್ತೆಯಾಗಿತ್ತು. ಮಾರಕಾಸಗಳಿಂದ ಕತ್ತು ಕೊಯ್ದು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಸಾರ್ವಜನಿಕರು ಕೊಟ್ಟ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿ ಪೊಲೀಸರು, ತನಿಖೆ ಕೈಗೊಂಡಾಗ ಈತನಿಗೆ ಮಹಿಳೆಯ ಪರಿಚಯ ಇರುವುದು ಬೆಳಕಿಗೆ ಬಂದಿತ್ತು.
ಖಾಸಗಿಯಾಗಿ ಸಿಗುವಂತೆ ಒತ್ತಾಯ ಮಾಡುತ್ತಿದ್ದ. ಇದರಿಂದ ನೊಂದು ಮಹಿಳೆ ತನ್ನ ಪತಿ ಜತೆಗೆ ಸೇರಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾಲಕ್ಷ್ಮೀಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.