ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ಕಾವೇರುತ್ತಿರುವಂತೆಯೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮುಂದಿನ 5 ವರ್ಷದ ಅವಧಿಗೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಘೋಷಿಸಿರುವ ಬಿಜೆಪಿ, 19 ಲಕ್ಷ ಉದ್ಯೋಗ ಸೃಷ್ಟಿ, ಕರೊನಾ ಲಸಿಕೆ ಉಚಿತ ವಿತರಣೆಯ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮಸೂರ ಬೇಳೆಯನ್ನು ಕನಿಷ್ಠ ಬೆಂಬಲ ಬೆಲೆಯ ವ್ಯಾಪ್ತಿಗೆ ತರುವ ವಾಗ್ದಾನ ನೀಡಿದ್ದಾರೆ. ಹೊಸದಾಗಿ 3 ಲಕ್ಷ ಶಿಕ್ಷಕರ ನೇಮಕ, ಐಟಿ ಹಬ್ ಆಗಿ ಬಿಹಾರವನ್ನು ಅಭಿವೃದ್ಧಿಪಡಿಸುವುದು, 10 ಲಕ್ಷ ಉದ್ಯೋಗ ಸೃಷ್ಟಿ, ಒಂದು ಕೋಟಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ, ಆರೋಗ್ಯ ಕ್ಷೇತ್ರದಲ್ಲಿ ಒಂದು ಲಕ್ಷ ನೌಕರಿ ಸೃಷ್ಟಿ, 30 ಲಕ್ಷ ಜನರಿಗೆ ಪಕ್ಕಾ ಮನೆ ಒದಗಿಸುವುದು ಸೇರಿ 11 ಸಂಕಲ್ಪಗಳನ್ನು ಅದು ಘೋಷಿಸಿದೆ.
ಇದನ್ನೂ ಓದಿ: ಲೈಟ್ ಫಿಶಿಂಗ್ ದೋಣಿ ವಶಕ್ಕೆ ಪಡೆದ ಮೀನುಗಾರರು
ಜೆಡಿಯು ಪ್ರಣಾಳಿಕೆ ಬಿಡುಗಡೆ
ಬಿಹಾರದಲ್ಲಿ ಎನ್ಡಿಎ ನೇತೃತ್ವವಹಿಸಿಕೊಂಡಿರುವ ಜೆಡಿಯು ಕೂಡ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ‘ಭರವಸೆಗಳು ಈಡೇರಲಿವೆ, ಈಗ ಹೊಸ ಉದ್ದೇಶಗಳಿವೆ’ ಎಂಬ ಘೋಷ ಮೂಲಕ ಯುವ ಮತ್ತು ಮಹಿಳಾ ಸಬಲೀಕರಣದ ಆಶ್ವಾಸನೆಗಳನ್ನು ನೀಡಿದೆ. ಚುನಾವಣೆ ಘೋಷಣೆ ಸಮಯದಲ್ಲಿ ಸಿಎಂ ನಿತೀಶ್ ಕುಮಾರ್ ಪ್ರಕಟಿಸಿದ್ದ ಎರಡನೇ ಹಂತದ ‘ಸಾಥ್ ನಿಶ್ಚಯ್’ ಕೂಡ ಪ್ರಣಾಳಿಕೆಯ ಭಾಗವಾಗಿದೆ. (ಏಜೆನ್ಸೀಸ್)