ಬೆಂಗಳೂರು: ಶಾದಿಭಾಗ್ಯ (ಬಿದಾಯಿ) ಯೋಜನೆಯಡಿ ಅರ್ಜಿ ಸ್ವೀಕರಿಸುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸೂಚನೆ ಹೊರಡಿಸಿದೆ.
ಬಜೆಟ್ನಲ್ಲಿ ಶಾದಿಭಾಗ್ಯ ಯೋಜನೆಗೆ ಅನುದಾನ ನಿಗದಿ ಪಡಿಸದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅರ್ಜಿ ಸ್ವೀಕರಿಸುವುದು ಬೇಡ ಎಂದು ತಿಳಿಸಲಾಗಿದೆ. ಮಂಜೂರು ಮಾಡಲು ಬಾಕಿ ಇರುವ ಅರ್ಹ ಅರ್ಜಿಗಳ ಮಾಹಿತಿ ಮಾರ್ಚ್ 9ರೊಳಗೆ ಸಲ್ಲಿಸುವಂತೆ ಸೂಚನೆ
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಾದಿಭಾಗ್ಯ ಯೋಜನೆ ಜಾರಿಗೆ ಬಂದಿತ್ತು. ಈ ಶಾದಿಭಾಗ್ಯ ಯೋಜನೆ ವಿರುದ್ಧ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ನಡೆಸಿತ್ತು.
ಯಾರಿಗೆ ಶಾದಿ ಭಾಗ್ಯ?: ಅಲ್ಪಸಂಖ್ಯಾತ ಸಮುದಾಯಗಳ ವಾರ್ಷಿಕ 1.50 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ಕುಟುಂಬಗಳ ಹೆಣ್ಣುಮಕ್ಕಳಿಗೆ ಶಾದಿ ಭಾಗ್ಯ ಯೋಜನೆ ಅನ್ವಯವಾಗುತ್ತಿತ್ತು. ಲಗ್ನಪತ್ರಿಕೆ ಮತ್ತು ಇತರ ದಾಖಲೆ ಸಲ್ಲಿಸಿದರೆ ಮದುವೆ ದಿನದಂದು ವಧುವಿನ ಖಾತೆಗೆ ಹಣ ಸಂದಾಯವಾಗುತ್ತಿತ್ತು.
ಮದುವೆ ಆದ ಬಳಿಕ ವಧು-ವರನ ಭಾವಚಿತ್ರ, ಧಾರ್ವಿುಕ ಸಂಸ್ಥೆ ನೀಡಿರುವ ಮದುವೆ ಪ್ರಮಾಣಪತ್ರ ಅಥವಾ ಉಪನೋಂದಣಾಧಿಕಾರಿಗಳು ನೀಡಿರುವ ಮದುವೆ ನೋಂದಣಿ ಪತ್ರ ಪಡೆದು ಸಲ್ಲಿಸಬೇಕು ಎಂಬ ನಿಯಮವಿತ್ತು. ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಮೂಲಕ ಅನುದಾನ ಪಡೆಯಬಹುದಾಗಿದ್ದು, ಸಲ್ಲಿಕೆಯಾದ ಅರ್ಜಿಯಲ್ಲಿ ಅತೀ ಕಡಿಮೆ ಆದಾಯವಿರುವ ಫಲಾನುಭವಿಗೆ ಅನುದಾನ ಲಭ್ಯತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಿಕೊಡಲಾಗುತ್ತಿತ್ತು.