ಆಲಮೇಲ: ಮಹಾರಾಷ್ಟ್ರದ ಉಜನಿ ಹಾಗೂ ವೀರಡ್ಯಾಮ್ನಿಂದ ಮಂಗಳವಾರ ಮಧ್ಯಾಹ್ನ 98 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡಲಾಗಿದೆ.
ಎರಡು ಡ್ಯಾಂಗಳಿಂದ ಅಪಾರ ನೀರು ಹರಿದು ಬರುತ್ತಿರುವುದರಿಂದ ಅಜಲಪುರ ತಾಲೂಕಿನ ಸೊನ್ನ ಬ್ರಿಜ್ನಿಂದ ಒಂದು ಲಕ್ಷ ಒಂದು ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಆಲಮೇಲ ತಾಲೂಕಿನ ತಾರಾಪುರ ಗ್ರಾಮ ಜಲಾವೃತವಾಗುವ ಹಿನ್ನೆಲೆ ಸಿಂದಗಿ ತಹಸೀಲ್ದಾರ್ ಸಂಜೀವಕುಮಾರ ದಾಸರ ಭೇಟಿ ನೀಡಿ ಗ್ರಾಮಸ್ಥರಿಗೆ ಎಚ್ಚರದಿಂದಿರಲು ಮನವಿ ಮಾಡಿದರು.
ಮಂಗಳವಾರ 58 ಸಾವಿರ ಕ್ಯೂಸೆಕ್ ನೀರು ಬ್ರಿಜ್ಗೆ ಬಂದಿದ್ದು, ಈಗ ಮತ್ತೆ 1ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ತಾರಾಪುರ, ತಾವರಖೇಡ ಸೇರಿ ವಿವಿಧ ಗ್ರಾಮಗಳು ಜಲಾವೃತವಾಗುವ ಭೀತಿಯಲ್ಲಿವೆ. ಪ್ರತಿ ವರ್ಷ ಸೊನ್ನ ಬ್ರಿಜ್ ಹಿನ್ನೀರಿನಿಂದ ಜಲಾವೃತವಾಗುವ ತಾರಾಪುರ ಗ್ರಾಮದಲ್ಲಿ ಜನರು ಹೈರಾಣುಗುತ್ತಿದ್ದಾರೆ. ಶಾಶ್ವತ ಪರಿಹಾರಕ್ಕಾಗಿ ನಿವೇಶನ ನೀಡಿದ್ದರೂ ಜಿಲ್ಲಾಡಳಿತ ಹಂಚಿಕೆ ಮಾಡುವಲ್ಲಿ ವಿಲವಾಗಿದೆ ಎಂದು ಗ್ರಾಮಸ್ಥ ಮಡಿವಾಳ ಇಂಡಿ ಆರೋಪಿಸಿದ್ದಾರೆ.
ಗ್ರಾಮದಲ್ಲಿನ ಮನೆಗಳು ನೆಲಕ್ಕುರುಳುತ್ತಿವೆ. 15 ದಿನಗಳ ಹಿಂದೆಯಷ್ಟೆ 20ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಈಗ ಮತ್ತೆ ಐದು ಮನೆಗಳು ಬಿದ್ದಿವೆ. ಇಲ್ಲಿಂದ ನಾವು ಸ್ಥಳಾಂತರವಾಗುತ್ತಿರುವುದರಿಂದ 12 ವರ್ಷದಿಂದ ಯಾವುದೇ ಮನೆ ಕಟ್ಟಿಕೊಂಡಿಲ್ಲ. ಸರ್ಕಾರ ನಮಗೆ ಸ್ಥಳಾಂತರಿಸುತ್ತಿಲ್ಲ. ಪರಿಹಾರವನ್ನೂ ನೀಡುತ್ತಿಲ್ಲ. ಹೀಗಾಗಿ ನಾವು ಜೀವ ಭಯದಲ್ಲೇ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥ ರೇವಣಸಿದ್ದಯ್ಯ ಹಿರೇಮಠ ತಿಳಿಸಿದ್ದಾರೆ.