ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ರಾಷ್ಟ್ರವ್ಯಾಪಿ ಕರೆ ನೀಡಿರುವ ಭಾರತ್ ಬಂದ್ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಜನರ ಮನಸ್ಸಿನಲ್ಲಿ ಬಂದ್ ಎಂಬ ಭಾವನೆ ಮೂಡಿರುವುದರಿಂದ ಎಲ್ಲಿ ತೊಡಕಾಗುತ್ತದೆಯೋ ಎಂಬ ಭೀತಿಯಿಂದ ಜನರ ಚಟುವಟಿಕೆ ಕೊಂಚ ಪ್ರಮಾಣದಲ್ಲಿ ತಗ್ಗಿದೆ.
ಎಂದಿನಂತೆ ರಾಜ್ಯದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಕೆಲವಡೆ ಪ್ರತಿಭಟನೆಗಳು ನಡೆಯುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ವ್ಯಾಪಾರ ವಹಿವಾಟುಗಳಲ್ಲಿ ಕೊಂಚ ಇಳಿಮುಖವಾಗುವ ಸಾಧ್ಯತೆ ಕಾಣುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾಜ್ಯದ ಚಿತ್ರಣ ಈಗ ಹೇಗಿದೆ ಎಂಬುದು ನೋಡುವುದಾದರೆ…
ರಾಜಧಾನಿಯಲ್ಲಿ ಕೊಂಚ ಮಟ್ಟಿಗೆ ತಟ್ಟಿದ ಬಂದ್ ಬಿಸಿ
ಬೆಂಗಳೂರಿನ ಕೆ.ಆರ್. ಮಾರ್ಕೆಟ್ಗೆ ಸ್ವಲ್ಪ ಮಟ್ಟಿಗೆ ಬಂದ್ ಬಿಸಿ ತಟ್ಟಿದೆ. ಗ್ರಾಹಕರು ಮತ್ತು ವ್ಯಾಪಾರಸ್ಥರು ಅವಸರವಸರಾಗಿ ವಹಿವಾಟು ಮುಗಿಸುತ್ತಿದ್ದಾರೆ. ಜನರಿಂದ ಗಿಜಿಗುಡುತ್ತಿದ್ದ ಕೆ.ಆರ್.ಮಾರ್ಕೆಟ್ನಲ್ಲಿ ಸದ್ಯಕ್ಕೆ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಬಿಎಂಟಿಸಿ ಬಸ್ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬೆರಳೆಣಿಕೆಯ ಪ್ರಯಾಣಿಕರನ್ನು ಹೊತ್ತು ಬಿಎಂಟಿಸಿ ಬಸ್ಗಳು ಸಾಗುತ್ತಿವೆ.
ಮೈಸೂರಿಗೆ ಇಲ್ಲ ಮುಷ್ಕರದ ಬಿಸಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಚಿಕ್ಕ ಮಾರುಕಟ್ಟೆಯಲ್ಲೂ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬಸ್ ಸಂಚಾರವು ಸುಗಮವಾಗಿ ನಡೆಯುತ್ತಿದೆ. ಇನ್ನೊಂದೆಡೆ ಕಾರ್ಮಿಕ ಸಂಘಟನೆಗಳ ಮುಷ್ಕರ ಕೈಗೊಂಡಿವೆ. ನಂಜನಗೂಡು- ಮೈಸೂರು ರಸ್ತೆಯಲ್ಲಿ ಎಐಟಿಯುಸಿಯಿಂದ ಪ್ರತಿಭಟನೆ ನಡೆಯುತ್ತಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರತಿಭಟನಾಕಾರರ ಬಂಧನ
ಕೋಲಾರದಲ್ಲಿ ಕೆಎಸ್ಆರ್ಟಿಸಿ ಡಿಪೋ ಮುಂದೆ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಸ್ ಹೊರಹೊಗದಂತೆ ಪ್ರತಿಭಟನಾಕಾರರು ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದು ಬಿಟ್ಟರೆ, ಎಂದಿನಂತೆ ಸಂಚಾರ ಆರಂಭವಾಗಿದ್ದು ಜನಜೀವನ ಮಾಮೂಲಿಯಂತಿದೆ.
ಮಡಿಕೇರಿಯಲ್ಲಿ ಬಸ್ಗೆ ಕಲ್ಲು ತೂರಿದ ಕಿಡಿಗೇಡಿಗಳು
ಭಾರತ್ ಬಂದ್ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಮಡಿಕೇರಿ ನಗರದ ಹೊರವಲಯದ ಚೈನ್ ಗೇಟ್ ಬಳಿ ಮಡಿಕೇರಿಯಿಂದ ಮೈಸೂರಿನ ಕಡೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ತೂರಿದ್ದಾರೆ. ಉಳಿದಂತೆ ಸಾಮಾನ್ಯ ಜನಜೀವನ ಎಂದಿನಂತೆ ಸಾಗಿದೆ. ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊಡಗಿನಲ್ಲಿ ಯಾವುದೇ ಸಂಘಟನೆ ಬಂದ್ಗೆ ಕರೆ ನೀಡಿಲ್ಲ. ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು, ಕಾರ್ಮಿಕ ಸಂಘಟನೆಯಿಂದ ಕೇವಲ ಪ್ರತಿಭಟನೆ ಮಾತ್ರ ನಡೆಯಲಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಗೆ ತಟ್ಟದ ಬಂದ್ ಬಿಸಿ
ವಾಣಿಜ್ಯ ನಗರಿಯಲ್ಲೂ ಜನಜೀವನ ಎಂದಿನಂತಿದೆ. ದಿನನಿತ್ಯದಂತೆ ಅಂಗಡಿ ಮುಂಗಟ್ಟುಗಳು ಹಾಗೂ ಹೊಟೇಲ್ಗಳು ಓಪನ್ ಆಗಿವೆ. ಬೆಳಿಗ್ಗೆಯಿಂದಲೇ ವ್ಯಾಪಾರ-ವಹಿವಾಟು ಆರಂಭವಾಗಿದೆ. ಸಂಚಾರವು ಕೂಡ ಎಂದಿನಂತೆ ಸಾಗಿದೆ. ಬಂದ್ಗೆ ಬೆಂಬಲ ನೀಡದೇ ಕೇವಲ ಕೆಲಸದಿಂದ ದೂರ ಉಳಿದು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಉಳಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಾಮರಾಜನಗರ, ಹಾಸನ, ಮಂಡ್ಯ, ತುಮಕೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದೆಲ್ಲೆಡೆ ಬಂದ್ ಪರಿಣಾಮ ಇಲ್ಲ. ಎಂದಿನಂತೆ ಜನಜೀವನ ಹಾಗೂ ವ್ಯಾಪಾರ ವಹಿವಾಟು ಸಾಗಿವೆ. ಆದರೆ, ಬಂದ್ಗೆ ಕರೆ ನೀಡಿರುವ ಸಂಘಟನೆಗಳು ಮಾತ್ರ ಪ್ರತಿಭಟನೆಯ ಮೂಲಕ ಬಂದ್ ಆಚರಿಸುತ್ತಿವೆ. ಮುಂಜಾಗ್ರತ ಕ್ರಮವಾಗಿ ಪ್ರತಿ ಜಿಲ್ಲೆಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್)