ಭರಮಸಾಗರ: ಜನತಾ ಕರ್ಫ್ಯೂಗೆ ಭರಮಸಾಗರದಲ್ಲಿ ಭಾನುವಾರ ಸಂಪೂರ್ಣ ಬೆಂಬಲ ದೊರೆತಿದೆ. ಬೆಳಗ್ಗೆಯಿಂದ ಸಂಜೆ ವರೆಗೆ ಜನರು ಮನೆಯಿಂದ ಹೊರ ಬರಲಿಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಲಾಗಿತ್ತು.
ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಎಂದಿನಂತೆ ವೈದ್ಯಕೀಯ ಸೇವೆ, ಔಷಧ ಅಂಗಡಿ ತೆರೆದಿದ್ದವು. ಬೆಳಗ್ಗೆ 4ಕ್ಕೇ ದಿನಪತ್ರಿಕೆ ವಿತರಿಸಲಾಯಿತು. ಬೆಳಗ್ಗೆ 7ರ ನಂತರ ಹಾಲು ದೊರೆಯದೆ ಜನ ಪರಿತಪಿಸಿದರು.
ಡಂಗೂರ ಜಾಗೃತಿ: ಶನಿವಾರ ಮನೆಯಿಂದ ಯಾರೂ ಹೊರ ಬರಬಾರದೆಂದು ಗ್ರಾಮಾಡಳಿತ ಡಂಗೂರದ ಮೂಲಕ ಜಾಗೃತಿ ಮೂಡಿಸಿದ್ದರಿಂದ ಜನ ಮನೆಯಲ್ಲಿಯೇ ಇದ್ದರು.
ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಧ್ವನಿ ಮುದ್ರಿಕೆಯನ್ನು ಸಾರ್ವಜನಿಕರಗೆ ಕೇಳಿಸುತ್ತ ಕೆಲವರು ಹಾಲು ಮತ್ತು ಪತ್ರಿಕೆ ವಿತರಿಸಿದರು.
ಸಂಜೆ ಐದು ಗಂಟೆಯಾಗುತ್ತಿದ್ದಂತೆ ಚಪ್ಪಾಳೆ ತಟ್ಟುವ ಮೂಲಕ ವೈದ್ಯರು, ಭದ್ರತಾ ಸಿಬ್ಬಂದಿ, ಪೌರಕಾರ್ಮಿಕರು, ಸ್ವಯಂಸೇವಕರು, ಮಾಧ್ಯಮ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು.