ನವದೆಹಲಿ: ಬಾಲಿವುಡ್ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಟೀಕೆಗಳು ಹೆಚ್ಚಾಗಿವೆ. ಸುಶಾಂತ್ ಆತ್ಮಹತ್ಯೆಗೆ ರಿಯಾ ಅವರೇ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಪಟನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರದಲ್ಲಿ ಆನ್ಲೈನ್ನಲ್ಲಿ ಬಂಗಾಳಿ ಮಹಿಳೆಯರನ್ನು ನಿಂದಿಸುವವರ ಸಂಖ್ಯೆ ಹೆಚ್ಚಾಗಿದೆ.
ರಿಯಾ ಚಕ್ರವರ್ತಿ ವಿರುದ್ಧ ಹಣ ಸುಲಿಗೆಕೋರರು ಮತ್ತು ಮಾಟಮಂತ್ರ ಮಾಡಿಸುವವರು ಎಂದು ಆರೋಪಿಸಲಾಗಿತ್ತು. ಅದರಂತೆ ಈಗ ಈ ನಿಂದನೆಗಳನ್ನು ಬಂಗಾಳಿ ಮಹಿಳೆಯರಿಗೆ ಅನ್ವಯಿಸಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಾಮೂಹಿಕವಾಗಿ ನಿಂದಿಸುತ್ತಿದ್ದಾರೆ. ಪುರುಷರ ಮೇಲೆ ಸವಾರಿ ಮಾಡುವವರು ಎಂದೂ ಅವರನ್ನು ಜರಿಯಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಂಗಾಳಿ ಮಹಿಳೆಯರು ಕೋಲ್ಕತ ಪೊಲೀಸ್ ಸೈಬರ್ ಸೆಲ್ಗೆ ಮತ್ತು ರಾಜ್ಯ ಮಹಿಳಾ ಆಯೋಗದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಲಾರಂಭಿಸಿದ್ದಾರೆ. ಇದನ್ನು ಆಧರಿಸಿ ನಿಂದಕ ನೆಟ್ಟಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳು ಕಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾನಸಿಕ ರೋಗ ತಜ್ಞೆಯ ಮೊದಲ ದೂರು: ಕೋಲ್ಕತದಲ್ಲಿ ಮಾನಸಿಕ ರೋಗ ತಜ್ಞೆಯಾಗಿರುವ ಡಾ. ಚಂದ್ರನ್ ಚಕ್ರವರ್ತಿ ಆನ್ಲೈನ್ ನಿಂದನೆ ಕುರಿತು ಕೋಲ್ಕತ ಪೊಲೀಸರಿಗೆ ದೂರು ಕೊಟ್ಟ ಮೊದಲಿಗರು. ಜರ್ಮನಿಯಲ್ಲಿ ವಾಸವಾಗಿರುವ ತನ್ನ ಸ್ನೇಹಿತೆ ಹಾಗೂ ಚಕ್ರವರ್ತಿ ಎಂಬ ಸರ್ನೇಮ್ ಹೊಂದಿರುವ ತಮ್ಮ ಸ್ನೇಹಿತೆಯನ್ನು ಟ್ರೋಲ್ಗಳು ನಿಂದಿಸುತ್ತಿದ್ದರು. ಒಂದಷ್ಟು ಸಂದೇಶಗಳನ್ನು ಕೋಲ್ಕತ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಇದು ಸರಿಯಲ್ಲ ಎಂದು ಹೇಳಿ ಆಕೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದೆ. ಆಗಿನಿಂದ ಟ್ರೋಲ್ಗಳು ನನ್ನ ಬೆನ್ನುಬಿದ್ದಿದ್ದಾರೆ ಎಂದು ಕೋಲ್ಕತ ಪೊಲೀಸರಿಗೆ ದೂರು ಕೊಟ್ಟಿದ್ದರು.
ಇದನ್ನೂ ಓದಿ: ಬೆಡ್ಗಳೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ದೂರು ದಾಖಲಿಸಿದ ನಂತರದಲ್ಲಿ ಆನ್ಲೈನ್ನಲ್ಲಿ ಬಂಗಾಳಿ ಮಹಿಳೆಯರನ್ನು ನಿಂದಿಸುವ ನೆಟ್ಟಿಗರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಹೆಚ್ಚೆಚ್ಚು ದೂರುಗಳು ಬರುತ್ತಿವೆ. ಈ ದೂರುಗಳನ್ನು ಕೋಲ್ಕತ ಪೊಲೀಸ್ನ ಸೈಬರ್ ಸೆಲ್ಗೆ ರವಾನಿಸುತ್ತಿರುವುದಾಗಿ ಪಶ್ಚಿಮ ಬಂಗಾಳ ಮಹಿಳಾ ಆಯೋಗದ ಅಧ್ಯಕ್ಷೆ ಲೀನಾ ಗಂಗೋಪಧ್ಯಾಯ ಕೂಡ ಹೇಳಿದ್ದಾರೆ.
ಮಾಚ್-ಮಸಾಲಾ-ಮಿಸ್ಟಿಯನ್ನು ಅರ್ಥ ಮಾಡಿಕೊಳ್ಳಿ: ಇದೇ ವೇಳೆ ಆನ್ಲೈನ್ ನಿಂದನೆಯನ್ನು ಖಂಡಿಸಿರುವ ಟಿಎಂಸಿಯ ಸಂಸತ್ ಸದಸ್ಯೆ ನುಸ್ರತ್ ಜಹಾನ್ ಮತ್ತಿತರ ಪ್ರತಿಷ್ಠಿತ ಮಹಿಳೆಯರು, ನಿಂದಕ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವು ಬಂಗಾಳಿ ಹುಡುಗಿಯರು ಕೂಡ ಇತರೆ ರಾಜ್ಯಗಳ ಹುಡುಗಿಯರು ಮತ್ತು ಮಹಿಳೆಯರಂತೆ ದಿನಪೂರ್ತಿ ಕೆಲಸ ಮಾಡುತ್ತೇವೆ, ಆಡುಗೆ ಮಾಡುತ್ತೇವೆ ಜತೆಗೆ ಜಾಗತಿಕ ಮಟ್ಟದ ಸಾಧನೆಗಳನ್ನೂ ಮಾಡುತ್ತೇವೆ. ಆದ್ದರಿಂದ, ನಮ್ಮನ್ನು ಅವಮಾನಿಸುವ ನಿಮ್ಮ ಕೆಟ್ಟ ಸಂಪ್ರದಾಯವನ್ನು ಇಲ್ಲಿಗೇ ಕೊನೆಗೊಳಿಸಿ. ನಿಮ್ಮ ಮಾಚ್-ಮಸಾಲಾ-ಮಿಸ್ಟಿ ಬಗ್ಗೆ ನಿಮಗೆ ಸಂಪೂರ್ಣ ಅರಿವು ಇಲ್ಲ ಎಂಬುದು ನಿಮ್ಮ ವರ್ತನೆಯಿಂದಲೇ ತಿಳಿದುಬರುತ್ತದೆ. ಮೊದಲು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ.
ಭಾರತ ಉಪಖಂಡದಲ್ಲಿ ಮುಂದುವರಿದ ನಕ್ಷೆ ರಾಜಕೀಯ; ಪಿಒಕೆಯನ್ನು ತನ್ನದೆಂದು ಹೊಸ ನಕ್ಷೆ ಬರೆದ ಪಾಕಿಸ್ತಾನ