ಬಳ್ಳಾರಿ: ಬೇಲಿಯೇ ಎದು ಹೊಲ ಮೇಯ್ದ ಘಟನೆ ಇದು. ಮನೆಗಳ್ಳತನವಾಗಿದೆ ಎಂದು ದೂರು ನೀಡೋಕೆ ಬಂದರೆ ನಿರ್ಲಕ್ಷ್ಯ ಮಾಡಿದ್ದಾರೆ ಈ ಪೊಲೀಸರು.
ದೂರು ದಾಖಲಿಸಿಕೊಳ್ಳದೇ ಯಶಸ್ವಿಯಾಗಿ ಕಳ್ಳರನ್ನೂ ಹಿಡಿದಿದ್ದಾರೆ, ಕಳ್ಳರಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಕಳ್ಳತನದಲ್ಲಿ ವಶ ಪಡಿಸಿಕೊಂಡದ್ದನ್ನು ಮಾಲೀಕರಿಗೆ ಹಿಂದಿರುಗಿಸದೇ ಪಿಎಸ್ಐ ಹಾಗೂ ಸಿಪಿಐ ಹಂಚಿಕೊಂಡಿದ್ದಾರೆ.
2019 ಡಿಸೆಂಬರ್ 03ರಂದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಎಂಬಲ್ಲಿ ಗಂಗಮ್ಮನ ಮನೆಯಲ್ಲಿ ಕಳ್ಳತನವಾಗಿತ್ತು. 3 ತೊಲೆ ಬಂಗಾರ ಮತ್ತು 12 ಸಾವಿರ ರೂಪಾಯಿಗಳನ್ನು ಅದೇ ಗ್ರಾಮದವರು ಕದ್ದಿದ್ದರು.
ಈ ಸಂಬಂಧ ಕಳ್ಳತನವಾದ ಮನೆಯವರು ದೂರು ನೀಡಲು ಹೋದರೆ ದೂರು ದಾಖಲಿಸಿಕೊಂಡಿರಲಿಲ್ಲ ಪೊಲೀಸರು. ನಿರ್ಲಕ್ಷ ವಹಿಸಿದ್ದಲ್ಲದೇ, ಆರೋಪಿಗಳನ್ನು ಠಾಣೆಗೆ ಕರೆತಂದು ಬೆದರಿಸಿ, ಕಳ್ಳತನ ಮಾಡಿದ್ದ ಮಾಲನ್ನು ಅವರಿಂದ ಪಡೆದ ಪೊಲೀಸರು ತಮ್ಮತಮ್ಮಲ್ಲೇ ಹಂಚಿಕೊಂಡಿದ್ದಾರೆ.
ಈ ಸಂಬಂಧ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಬಳ್ಳಾರಿ ಎಸ್ಪಿ ಸಿ.ಕೆ. ಬಾಬಾ ಪೊಲೀಸ್ ಆರೋಪಿಗಳ ವಿರುದ್ಧ ಎಫ್ಐಆರ್ ಮಾಡಿ ತನಿಖೆಗೆ ಆದೇಶ ಮಾಡಿದ್ದರು. ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ ತನಿಖೆ ನಡೆಸಿ ಎಸ್ಪಿಗೆ ವರದಿ ನೀಡಿದ್ದರು.
ಈ ವರದಿ ಆಧಾರದ ಮೇಲೆ ಸಿರುಗುಪ್ಪ ಸಿಪಿಐ ಟಿ.ಆರ್. ಪವಾರ್ ಮತ್ತು ಹಚ್ಚೊಳ್ಳಿ ಪಿಎಸ್ಐ ಶಂಕ್ರಪ್ಪ ಅವರನ್ನು ಬಳ್ಳಾರಿ ಎಸ್ಪಿ ಸಿ.ಕೆ. ಬಾಬಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಮಾನತಾದ ಪೊಲೀಸರ ಬಳಿ ಇದ್ದ ಕಳ್ಳತನದ ಬಂಗಾರವನ್ನು ಮತ್ತು ಆರೋಪಿಗಳನ್ನು ಕೋರ್ಟ್ ವಶಕ್ಕೆ ಒಪ್ಪಿಸಲಾಗಿದೆ.