ಬಳ್ಳಾರಿ:ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಬೃಹತ್ ಧ್ವಜ ಸ್ತಂಭದಲ್ಲಿ ಸಾವಿರಾರು ಜನರು ತಿರಂಗಾ ಧ್ವಜ ಹಿಡಿದು ಜಯ ಘೋಷಗಳ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಶನಿವಾರ ಧ್ವಜಾರೋಹಣ ನೆರವೇರಿಸಿದರು.
ನಗರದ ವಿವಿಧ ಶಾಲಾ ಕಾಲೇಜುಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೈಯಲ್ಲಿ ಧ್ವಜ ಹಿಡಿದು ಒಂದೇ ಮಾತರಂ ಘೋಷಣೆ ಕೂಗುತ್ತ ದೇಶಭಕ್ತಿ ಗೀತೆಗಳನ್ನು ಹಾಡುತ್ತ್ತ ತಂಡೋಪ ತಂಡವಾಗಿ ಗವಿಯಪ್ಪ ವೃತ್ತದಲ್ಲಿ ಜಮಾವಣೆಗೊಂಡರು. ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ 1100 ಅಡಿ ಉದ್ದದ ಬಾವುಟ ಧ್ವಜಾರೋಹಣ ಸಂದರ್ಭ ತರಲಾಯಿತು. ಇಡೀ ವೃತ್ತವೇ ಜನರಿಂದ ಮತ್ತು ವಿದ್ಯಾರ್ಥಿಗಳಿಂದ ಕಿಕ್ಕಿರಿದು ಹೋಗಿತ್ತು. ಸಚಿವ ಬಿ.ಶ್ರೀರಾಮುಲು 150 ಅಡಿ ಎತ್ತರದ ಧ್ವಜವನ್ನು ಕಂಬದ ತುದಿಗೆ ತಲುಪಿಸಿದಾಗ ಜನರ ಘೋಷಣೆ ಮುಗಿಲು ಮುಟ್ಟಿತ್ತು.
ಬಳಿಕ ಮಾತನಾಡಿದ ಶ್ರೀರಾಮುಲು, ನಮ್ಮ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನಗಳ ಫಲ ಈ ಸ್ವಾತಂತ್ರ್ಯ. ಇದರ ಬಗ್ಗೆ ಎಲ್ಲರೂ ಅರಿತು ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು. ದೇಶ ನಮಗೆ ಏನು ಮಾಡಿತು ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಮಾಡಬೇಕು ಎಂದು ಮನದಲ್ಲಿಟ್ಟುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು. ಆಗಲೇ ನಮ್ಮ ಪ್ರಧಾನಿ ಮೋದಿ ಅವರು ಹೇಳುವ ನವ ಭಾರತ ನಿರ್ಮಾಣ ಸಾಧ್ಯ. ಅದು ಯುವಕರಾದ ನಿಮ್ಮಿಂದ ಮಾತ್ರ ಸಾಧ್ಯ. ನಾಳಿನ ಭಾರತ ನಿಮ್ಮ ಕೈಯಲ್ಲಿದೆ ಎಂದರು.
ಧ್ವಜಾರೋಹಣದಲ್ಲಿ ಶಾಸಕ ಜಿ. ಸೋಮಶೇಖರರೆಡ್ಡಿ, ಎಂಎಲ್ಸಿ ವೈ.ಎಂ.ಸತೀಶ್. ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಸದಸ್ಯರಾದ ಎಂ.ಗೋವಿಂದರಾಜುಲು, ಶ್ರೀನಿವಾಸ್ ಮೋತ್ಕರ್, ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅದಾವತ್, ಎಡಿಸಿ ಪಿ.ಎಸ್.ಮಂಜುನಾಥ, ಎಸಿ ಆಕಾಶ್ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡಿ ಸಿದ್ದಲಿಂಗೇಶ್ ರಂಗಣ್ಣನವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ಕಾರ್ಯಕ್ರಮದಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ರಾಯಲ್ ಮತ್ತು ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು