ಬಳ್ಳಾರಿ: ಶಾಸಕ ಆನಂದ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದು ಕುರಿಗಳಿಗೆ ತೋಳ ಕಾವಲು ಇಟ್ಟಂತಾಗಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ಗಣಿಗಾರಿಕೆ ವೇಳೆ ಅರಣ್ಯ ಕಾಯ್ದೆ ಉಲ್ಲಂಘನೆಯಡಿ ಆನಂದ ಸಿಂಗ್ ವಿರುದ್ಧ 8 ಪ್ರಕರಣ ದಾಖಲಾಗಿವೆ. ಚಾರ್ಜ್ಶೀಟ್ನಲ್ಲಿ ದಾಖಲಿಸಿದಂತೆ ಸರ್ಕಾರದ ಬೊಕ್ಕಸಕ್ಕೆ ಒಟ್ಟು 23.20 ಕೋಟಿ ರೂ.ನಷ್ಟ ಮಾಡಿದ್ದಾರೆ. ಇಂಥವರಿಗೆ ಅರಣ್ಯ ಖಾತೆ ನೀಡಿದರೆ, ಪ್ರಕರಣಗಳ ವಿಚಾರಣೆ ವೇಳೆ ಸಾಕ್ಷೃ ಹೇಳಲು ಯಾರು ಮುಂದೆ ಬರುತ್ತಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಮಾಯಣ ಬರೆದ ವಾಲ್ಮೀಕಿಯಂತೆ ನನಗೂ ಬದಲಾವಣೆಗೆ ಅವಕಾಶ ಕೊಡಿ ಎಂದಿರುವ ಆನಂದ ಸಿಂಗ್ ಹೇಳಿಕೆ ಖಂಡನೀಯ. ವಾಲ್ಮೀಕಿ ಸುಳ್ಳನೂ ಅಲ್ಲ, ಕಳ್ಳನೂ ಅಲ್ಲ ಎಂದು ರಾಮಾಯಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದ್ದರಿಂದ ಶಾಸಕ ಆನಂದ ಸಿಂಗ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು. ಮುಖಂಡರಾದ ಕಲ್ಲುಕಂಬ ಪಂಪಾಪತಿ, ಮಾರೆಣ್ಣ, ಲೋಕೇಶ್, ವೆಂಕಟೇಶ್ ಹೆಗಡೆ ಇದ್ದರು.