ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ಸೋಮವಾರ ಪಾಲಿಕೆ ಆಯುಕ್ತ ಹಾಗೂ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಪತಿ ಜನಾರ್ದನ ರೆಡ್ಡಿ ಅವರ ನಿವಾಸದಿಂದ ತೆರಳಿ, ನಗರ ದೇವತೆ ಶ್ರೀ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಮೂಲಕ ಪಾಲಿಕೆ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿದ್ದರು.
ಇದನ್ನೂ ಓದಿ: ಜ್ಯೋತಿಷಿಗಳಿಗೆ ಡಿಮ್ಯಾಂಡ್! ನಾಮಪತ್ರ ಸಲ್ಲಿಕೆಗೆ ಶುಭ ಮುಹೂರ್ತದ ಕೋರಿಕೆ
ಈ ಮೆರವಣಿಗೆಯಿಂದ ರಾಯಲ್ ವೃತ್ತದಲ್ಲಿ ವಾಹನ ಸಂಚಾರ ಅಡೆತಡೆ ಉಂಟಾಯಿತು. ಬೆಂಬಲಿಗರನ್ನು ಚದುರಿಸಲು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಾಮಪತ್ರ ಸಲ್ಲಿಸಿದ ನಂತರ ಹೊರಬಂದ ಲಕ್ಷ್ಮೀ ಅರುಣಾ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕಣ್ಣೀರು ಹಾಕಿದರು. ನಾನು ನಾಮಪತ್ರ ಸಲ್ಲಿಸುವ ವೇಳೆ ಜನಾರ್ದನರೆಡ್ಡಿ ಬರಬೇಕಿತ್ತು ಎಂದು ಭಾವುಕರಾದರು. ಬಳ್ಳಾರಿ ಜಿಲ್ಲೆಯ ಜನತೆ ನಮ್ಮೊಂದಿಗೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಸಂಪೂರ್ಣಗೊಳಿಸಲು ಜನಾರ್ದನ ರೆಡ್ಡಿ ಅವರ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಬೇಕು ಎಂದು ತಿಳಿಸಿದರು. ಕೆಆರ್ಪಿಪಿ ಜಿಲ್ಲಾಧ್ಯಕ್ಷ ಗೋನಾಳ ರಾಜಶೇಖರ ಗೌಡ ಸೇರಿ ಅನೇಕರಿದ್ದರು.