ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗಿ
ಬಳ್ಳಾರಿ: ರಾಜಸ್ಥಾನದ ಉದಯ್ಪುರದ ದರ್ಜಿ ಕನ್ಹಯ್ಯ ಲಾಲ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಕ್ರಮ ಖಂಡಿಸಿ ಶ್ರೀರಾಮಸೇನೆ ಮತ್ತಿತರ ಹಿಂದು ಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಬಳ್ಳಾರಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ನಿಮಿತ್ತ ನಗರದಲ್ಲಿ ಬೆಂಗಳೂರು ರಸ್ತೆ, ತೇರುಬೀದಿ, ಮೋತಿ ಸರ್ಕಲ್, ರಾಯಲ್ ಸರ್ಕಲ್, ಜೈನ್ ಮಾರ್ಕೆಟ್, ಸುಧಾ ಕ್ರಾಸ್, ಸಂಗಮ್ ಸರ್ಕಲ್, ದೇವಿನಗರ ಸರ್ಕಲ್, ಎಸ್ಪಿ ಸರ್ಕಲ್, ಕೌಲ್ಬಜಾರ, ಗವಿಯಪ್ಪ ವೃತ್ತ, ಇನ್ಫ್ಯಾಂಟರಿ ರಸ್ತೆ, ಹೊಸ ಬಸ್ನಿಲ್ದಾಣ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟು, ಖಾಸಗಿ ಕಚೇರಿ ಗಳ ಬಾಗಿಲು ಮುಚ್ಚಿದ್ದವು. ಚಿತ್ರಮಂದಿರಗಳಲ್ಲಿ ಸಂಜೆ 5 ಗಂಟೆ ವರೆಗೆ ಎಲ್ಲ ಪ್ರದರ್ಶನಗಳನ್ನೂ ಸ್ಥಗತಗೊಳಿಸಲಾಗಿತ್ತು. ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ನಲ್ಲಿ ಭಾಗವಹಿಸಿದ್ದರು.
ಹಳೇ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿಲ್ಲದೇ, ಬಿಕೋ ಎನ್ನುತ್ತಿತ್ತು. ಹೊಸ್ ಬಸ್ ನಿಲ್ದಾಣದಿಂದ ದೂರ ಪ್ರಯಾಣದ ಬಸ್ಗಳು ಮಾತ್ರ ಕಾರ್ಯನಿವಹಿಸುತ್ತಿದ್ದವು. ನಗರದ ಕೆಲ ಖಾಸಗಿ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ರಜೆ ಘೋಷಣೆ ಮಾಡಿದ್ದವು.
ನಗರ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಂಸದೆ ಶಾಂತಾ, ಜಿಲ್ಲಾ ಹಿಂದು ರಕ್ಷಣಾ ವೇದಿಕೆ, ಆರ್ಆರ್ಎಸ್, ಬಜರಂಗದಳ, ಕೆಲ ಮುಸ್ಲಿಂ ಮುಖಂಡರು, ಬಿಜೆಪಿ ಮುಖಂಡರು, ಮಹಿಳಾ ಮುಖಂಡರು ಬೃಹತ್ ರ್ಯಾಲಿ ನಡೆಸಿದರು. ಹತ್ಯೆಗೀಡಾದ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಕೋರಿ ಮೌನಚಾರಣೆ ಸಲ್ಲಿಸಿದರು.