ಬಳ್ಳಾರಿ ಡಿಸಿ ಕಚೇರಿ ಎದುರು ಪ್ರತಿಭಟನೆ
ಬಳ್ಳಾರಿ: ಸ್ವಾತಂತ್ರ್ಯ ಹಾಗೂ ಆಯ್ಕೆಯ ಹಕ್ಕಿಗಾಗಿ ಹೋರಾಟ ನಿರತರಾಗಿರುವ ಇರಾನಿನ ಜನತೆಯ ಮೇಲಿನ ದಮನಕಾರಿ ಕ್ರಮ ನಿಲ್ಲಿಸಬೇಕೆಂದು ಇರಾನ್ ಸರ್ಕಾರಕ್ಕೆ ಭಾರತ ಸರ್ಕಾರ ಆಗ್ರಹಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ ಮಾತನಾಡಿ, ಇರಾನಿನ ತೆಹರಾನಿನಲ್ಲಿ ಸೆ.16 ರಂದು 22 ವರ್ಷದ ಮಾಷಾ ಅಮಿನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದರಿಂದ ಅವರು ಮೂರು ದಿನಗಳ ನಂತರ ಸಾವಿಗೀಡಾಗಿದ್ದರು. ಮಾಧ್ಯಮಗಳಲ್ಲಿ ವರದಿಯಾದಂತೆ ಇರಾನಿನಲ್ಲಿ ಚಾಲ್ತಿಯಲ್ಲಿರುವ ಹಿಜಾಬ್ ಧರಿಸುವ ನೀತಿಯನ್ನು ಸರಿಯಾಗಿ ಅನುಸರಿಸದೇ ಇದ್ದುದಕ್ಕಾಗಿ ನೈತಿಕ ಪೊಲೀಸರು ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿದ್ದಾಳೆ. ಈಕೆಯ ಸಾವಿನಿಂದ ಆ ದೇಶದ 80ಕ್ಕೂ ಹೆಚ್ಚು ನಗರಗಳಿಗೆ ಪ್ರತಿಭಟನೆ ವ್ಯಾಪಿಸಿದೆ. ಇಲ್ಲಿಯವರೆಗೂ 35 ಪ್ರತಿಭಟನಾಕಾರರು ಪ್ರಾಣತೆತ್ತಿದ್ದಾರೆ. ಇರಾನ್ ಸರ್ಕಾರದ ಮೂಲಭೂತವಾದಿ ಧೋರಣೆ, ವಸ್ತ್ರ ಸಂಹಿತೆ, ಮಹಿಳೆಯರ ಕುರಿತ ಸಂಕುಚಿತ ಮನೋಭಾವನೆ ಮತ್ತು ಪ್ರಜಾತಾಂತ್ರಿಕ ಹೋರಾಟವನ್ನು ದಮನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.