More

    ವಿದ್ಯಾವಂತರಾಗುವ ಜತೆಗೆ ಉದ್ಯೋಗದಾತರಾಗಿ

    ಸಾಗರ: ಶಿಕ್ಷಣ ಪಡೆದು ಹೆಚ್ಚೆಚ್ಚು ಉದ್ಯೋಗವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

    ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾವಂತರಾಗುವ ಜತೆಗೆ ಉದ್ಯೋಗದಾತರಾಗಬೇಕು ಎಂದರು.
    ಶಾಲೆಗೂ ದೇವರ ಗುಡಿಗೂ ವ್ಯತ್ಯಾಸವಿಲ್ಲ. ಆಧುನಿಕತೆಯು ಶಿಕ್ಷಣ ಕ್ಷೇತ್ರಕ್ಕೂ ಹಲವು ಕೊಡುಗೆ ನೀಡಿದೆ. ಬದಲಾದ ಕಾಲಘಟ್ಟದಲ್ಲಿ ಹೊಸ ಹೊಸ ಯೋಜನೆಗಳನ್ನು ನಮ್ಮ ಏಳಿಗೆಗೆ ಬಳಸಿಕೊಳ್ಳಬೇಕು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಎಲ್ಲ ಸೌಲಭ್ಯವೂ ಇದೆ ಎನ್ನುವುದು ಸಂತಸದ ವಿಚಾರ. ಗ್ರಾಮೀಣ ಭಾಗದ ಶಾಲೆ ಅಮೃತ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
    ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಓಡಾಡಲು ದಾರಿಯಿಲ್ಲದ ಕಾಲದಲ್ಲಿ ಹಳ್ಳಿಗಾಡಿನಲ್ಲಿ ಇಂತಹ ಶಾಲೆಗಳನ್ನು ರೂಪಿಸಿದ ಹಿಂದಿನ ದಿನಗಳ ಮಹನೀಯರನ್ನು, ಆ ದಿನಗಳಲ್ಲಿ ಎಲ್ಲೆಲ್ಲಿಂದಲೋ ಬಂದು ಕನಿಷ್ಠ ವೇತನಕ್ಕೆ ದುಡಿದ ಗುರುಗಳನ್ನು ನೆನಪಿಸಿಕೊಳ್ಳುವ ದಿನವಿದು. ಅನ್ನ ಅಂದಿನ ಸಮಸ್ಯೆ. ಅಕ್ಷರ ಕಲಿಕೆಯಲ್ಲಿ ಅನ್ನವಿದೆ ಎಂದು ಹೇಳಿಕೊಟ್ಟವರು ಶಿಕ್ಷಕರು. ಆ ಅರಿವು ಸದಾ ನಮ್ಮೊಂದಿಗಿರಬೇಕು ಎಂದರು.
    ಇದೀಗ ಅಂಗೈನಲ್ಲೇ ಪ್ರಪಂಚವಿದೆ. ತಂತ್ರಜ್ಞಾನ ಹಲವು ಅವಕಾಶಗಳನ್ನು ನಮಗೆ ಒದಗಿಸಿದೆ. ಅದಕ್ಕೆ ತಕ್ಕಂತೆ ಈಗಿನ ಶಿಕ್ಷಣ ಬದಲಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ತಮ್ಮ ಮಕ್ಕಳ ವಿಚಾರದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡುವುದನ್ನು ಕಾಣುತ್ತೇವೆ. ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಲ್ಲಿ ಇರುವ ಮನೋಭಾವ ಬದಲಾಗಬೇಕು. ಕಲಿಕೆ ಎಂದಿಗೂ ನಮ್ಮೊಂದಿಗೆ ಉಳಿಯುತ್ತದೆ. ಅಭ್ಯಾಸದ ಸಂದರ್ಭದಲ್ಲಿ ಏಕಾಗ್ರತೆ ಮುಖ್ಯ ಎಂದು ಹೇಳಿದರು.
    ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ದೊಂಬೆ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿ.ನಾ.ಕೃಷ್ಣಮೂರ್ತಿ, ವರದಪುರದ ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ಹೋಟೆಲ್ ಉದ್ಯಮಿ ಎಸ್.ಕೆ.ಚಂದ್ರು, ಮುಖ್ಯಶಿಕ್ಷಕ ಸತ್ಯಪ್ಪ, ಕೆ.ಎನ್.ತಿಮ್ಮಣ್ಣಭಟ್, ಸುರೇಶ್ ಶೆಟ್ಟಿ, ಕೃಷ್ಣವೇಣಿ, ಡಾ. ಜಯಪ್ರಕಾಶ್ ಮಾವಿನಕುಳಿ, ಬಿ.ಪಿ.ರಾಜೇಂದ್ರ, ಸಿರಿವಂತೆ ಸತ್ಯನಾರಾಯಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts