ನವದೆಹಲಿ: ರೋಹಿತ್ ಶರ್ಮ ಫಿಟ್ನೆಸ್ ಬಗ್ಗೆ ಸರಿಯಾದ ಮಾಹಿತಿ ನೀಡದೆ ಗೊಂದಲ ಮೂಡಿಸಿರುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಸಿಸಿಐನಿಂದ ಈ ಬಗ್ಗೆ ಸ್ಪಷ್ಟನೆ ಹೊರಬಿದ್ದಿದೆ. ತಂದೆಯ ಅನಾರೋಗ್ಯದಿಂದಾಗಿ ರೋಹಿತ್ ಶರ್ಮ ಐಪಿಎಲ್ ಬಳಿಕ ತವರಿಗೆ ಮರಳಿದ್ದರು ಎಂದು ತಡವಾಗಿ ಬಹಿರಂಗಪಡಿಸಿರುವ ಬಿಸಿಸಿಐ, ಡಿಸೆಂಬರ್ 11ರಂದು ಮತ್ತೊಮ್ಮೆ ಅವರ ಫಿಟ್ನೆಸ್ ಪರೀಕ್ಷೆ ನಡೆಯಲಿದೆ. ಈ ಮೂಲಕ ಅವರು ಟೆಸ್ಟ್ ಸರಣಿಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳುವರೇ, ಇಲ್ಲವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
‘ತಂದೆಯ ಅನಾರೋಗ್ಯದಿಂದಾಗಿ ರೋಹಿತ್ ಶರ್ಮ ಐಪಿಎಲ್ ಬಳಿಕ ಮುಂಬೈಗೆ ಮರಳಬೇಕಾಯಿತು. ತಂದೆ ಚೇತರಿಕೆ ಕಂಡ ಬಳಿಕ ಅವರು ಬೆಂಗಳೂರಿನ ಎನ್ಸಿಎಗೆ ತೆರಳಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ. ರೋಹಿತ್ ತಂದೆಗೆ ಕರೊನಾ ಸೋಂಕು ಬಂದಿತ್ತು ಎಂದೂ ವರದಿಯೊಂದು ತಿಳಿಸಿದೆ.
ಡಿಸೆಂಬರ್ 11ರಂದು ನಡೆಯುವ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ರೋಹಿತ್ ಆಸ್ಟ್ರೇಲಿಯಾದಲ್ಲಿನ 14 ದಿನಗಳ ಕಡ್ಡಾಯ ಕ್ವಾರಂಟೈನ್ನಿಂದಾಗಿ ಮೊದಲ 2 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಕ್ವಾರಂಟೈನ್ ವೇಳೆ ಅಭ್ಯಾಸ ನಡೆಸಲು ರೋಹಿತ್ಗೆ ಅವಕಾಶ ನೀಡಬೇಕೆಂದು ಆಸೀಸ್ಗೆ ಬಿಸಿಸಿಐ ಕೇಳಿಕೊಂಡಿದೆ ಎಂದೂ ಹೇಳಲಾಗುತ್ತಿದೆ.
ಆಸೀಸ್ ವಿರುದ್ಧದ ಮೊದಲ ಏಕದಿನಕ್ಕೆ ಮುನ್ನಾದಿನ ಕೊಹ್ಲಿ, ರೋಹಿತ್ ಐಪಿಎಲ್ನಲ್ಲಿ ಆಡಿದರೂ, ಆಸೀಸ್ ಪ್ರವಾಸಕ್ಕೆ ಯಾಕೆ ಬರಲಿಲ್ಲ ಎಂಬ ಬಗ್ಗೆ ತಿಳಿದಿಲ್ಲ ಎಂದಿದ್ದರು. ಅಲ್ಲದೆ ವೃದ್ಧಿಮಾನ್ ಸಾಹರಂತೆ ಆಸೀಸ್ನಲ್ಲೇ ಪುನಶ್ಚೇತನದಲ್ಲಿ ಪಾಲ್ಗೊಳ್ಳಬಹುದಿತ್ತು ಎಂದಿದ್ದರು. ಐಪಿಎಲ್ ವೇಳೆ ಸ್ನಾಯುಸೆಳೆತದ ಸಮಸ್ಯೆ ಎದುರಿಸಿದ್ದರೂ, ರೋಹಿತ್ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳಲ್ಲಿ ಆಡಿದ್ದರು. ಆದರೆ ಅವರು ಚುಟುಕು ಕ್ರಿಕೆಟ್ ಆಡಲಷ್ಟೇ ಫಿಟ್ ಆಗಿದ್ದರು ಎನ್ನಲಾಗಿದೆ.
ಟೆಸ್ಟ್ನಿಂದ ಇಶಾಂತ್ ಔಟ್, ಏಕದಿನಕ್ಕೆ ನಟರಾಜನ್ ಇನ್
ಐಪಿಎಲ್ ವೇಳೆ ಗಾಯಗೊಂಡ ಮತ್ತೋರ್ವ ಆಟಗಾರ ಹಾಗೂ ಅನುಭವಿ ವೇಗಿ ಇಶಾಂತ್ ಶರ್ಮ ಇನ್ನೂ ಮ್ಯಾಚ್ ಫಿಟ್ ಆಗದ ಕಾರಣದಿಂದಾಗಿ ಆಸೀಸ್ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಈ ಮುನ್ನ ಅವರು ಮೊದಲ 2 ಟೆಸ್ಟ್ ಪಂದ್ಯಗಳಿಗೆ ಮಾತ್ರ ಅಲಭ್ಯರಾಗಿದ್ದರು. ಇದೇ ವೇಳೆ ಮತ್ತೋರ್ವ ವೇಗಿ ಟಿ. ನಟರಾಜನ್ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವೇಗಿ ನವದೀಪ್ ಸೈನಿ ಅವರಿಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿರುವ ಕಾರಣದಿಂದಾಗಿ ನಟರಾಜನ್ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ಈ ಮುನ್ನ ಆಸೀಸ್ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದ ಟಿ. ನಟರಾಜನ್, ಬಳಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದಿಂದಾಗಿ ಪ್ರವಾಸಕ್ಕೆ ಅಲಭ್ಯರಾದಾಗ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದರು.