ಬಸವನಬಾಗೇವಾಡಿ: ಮುಂದಿನ ದಿನಗಳಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸೇವಾಕಾಂಕ್ಷಿಯಾಗಿ ಸ್ಪರ್ಧಿಸಲಿದ್ದು, ತವರು ಮನೆಯವರ ಶುಭಾಶೀರ್ವಾದ ಮುಖ್ಯವಾಗಿದ್ದು, ತಮ್ಮನ್ನು ಉಡಿ ತುಂಬಿ ಹಾರೈಸಿ ಪ್ರೋತ್ಸಾಹಿಸಬೇಕೆಂದು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ-ಜನೋಪಯೋಗಿಯಾಗಿ ಜನಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸುವ ಜೊತೆಗೆ ಕನ್ನಡಮ್ಮಳ ಸೇವೆ ಮಾಡಲು ಅವಕಾಶ ನೀಡಬೇಕು. ಬಸವನಬಾಗೇವಾಡಿ ತಾಲೂಕು ನನ್ನ ತವರು ಮನೆಯಾಗಿದ್ದರಿಂದ ಹೆಣ್ಣು ಮಕ್ಕಳಿಗೆ ಉಡಿ ತುಂಬಿ ಕಳಿಸುವುದು ನಮ್ಮ ಸಂಸ್ಕೃತಿ. ಈ ಬಾರಿ ಹೆಣ್ಣುಮಗಳಿಗೆ ಹೆಚ್ಚಿನ ಸ್ಥಾನಮಾನ ನೀಡಲು ಮುಂದಾಗಬೇಕು. 1985ರಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಹೋರಾಟ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಕನ್ನಡ ಅಭಿಮಾನಿಗಳು ನನಗೆ ಈ ಬಾರಿ ಹೆಚ್ಚು ಮತಗಳನ್ನು ನೀಡಿ ಸಾಹಿತ್ಯ ಪರಿಷತ್ತಿನ ಕೇಂದ್ರಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಡಾ. ಯುವರಾಜ ಮಾದನಶೆಟ್ಟಿ, ಎಂ.ಜಿ. ಆದಿಗೊಂಡ, ಎಚ್.ಬಿ. ಬಾರಿಕಾಯಿ, ಎಂ.ಬಿ. ತೋಟದ, ವೈ.ಕೆ. ಪತ್ತಾರ, ವಿವೇಕಾನಂದ ಕಲ್ಯಾಣಶೆಟ್ಟಿ, ಪ್ರಭಾಕರ ಖೇಡದ, ಎಸ್.ಬಿ. ಹಾವಿನಾಳ, ಕೆ.ಎಸ್. ಅವಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಕೊಟ್ರೇಶ ಹೆಗಡ್ಯಾಳ, ಎಸ್.ಪಿ. ಮಡಿಕೇಶ್ವರ ಇತರರಿದ್ದರು.