ಶನಿವಾರಸಂತೆ: ಆಲೂರು-ಸಿದ್ದಾಪುರದಲ್ಲಿ ಆಟ ಆಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ.
ಗ್ರಾಮದ ಮಮತಾ ಅವರ ಮಗ ಮೋಕ್ಷಿತ್ (8) ಗಾಯಗೊಂಡವನು. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಆಟವಾಡುತ್ತಿದ್ದ. ಏಕಾಏಕಿ ಬಂದ ಬೀದಿ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದೆ. ಬಾಲಕ ಕೂಗಿಕೊಂಡು ಓಡಿದರೂ ಬಿಡದ ನಾಯಿ ಅಟ್ಟಾಡಿಸಿಕೊಂಡು ಕಾಲು, ಕೈ, ಕುತ್ತಿಗೆ, ಮುಖವನ್ನು ಕಚ್ಚಿ ಗಾಯಗೊಳಿಸಿದೆ. ಬಾಲಕ ಕೂಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಓಡಿಬಂದು ನಾಯಿಯನ್ನು ಓಡಿಸಿ ರಕ್ಷಿಸಿದ್ದಾರೆ.
ಗಂಭೀರ ಗಾಯಗೊಂಡ ಬಾಲಕನನ್ನು ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.