ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಕಾವೇರಿದ್ದು, ಈ ಮಧ್ಯೆ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿಕೊಂಡಿದೆ. ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೂ ದೂರು ನೀಡಿದೆ.
ತೆಲಂಗಾಣದ ನಲಗೊಂಡದಲ್ಲಿ 2022ರಲ್ಲಿ ನಡೆದಿದ್ದ ಘಟನೆಯ ವಿಡಿಯೋ ಹಂಚಿಕೊಂಡು ಅದನ್ನು ಕರ್ನಾಟಕದ ಘಟನೆ ಎಂಬಂತೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾಗಳಲ್ಲಿ ಬಿಂಬಿಸಲಾಗಿದೆ. ಅಲ್ಲಿನ ಮತಾಂಧರು ಮಾಡಿರುವ ಕೃತ್ಯವನ್ನು ಕರ್ನಾಟಕದ ಘಟನೆ ಎಂಬಂತೆ ತೋರಿಸಲಾಗಿದೆ. ಇದು ಕಾಂಗ್ರೆಸ್ ಅಧೋಗತಿಗೆ ನಿದರ್ಶನ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ಅದನ್ನು ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಅವತಾರದಲ್ಲಿ ವಿಕ್ರಮ್ ರವಿಚಂದ್ರನ್; ಪುತ್ರನ ಚಿತ್ರಕ್ಕೆ ತಂದೆ ಕೊಟ್ಟ ಟೈಟಲ್ ಏನು?
ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಪತ್ರಕರ್ತರನ್ನು ಬೆದರಿಸುವ ಕೆಲಸ ಮಾಡಿದ್ದಾರೆ. ಅಂದು ಅಮಿತ್ ಷಾ ಕೂಡ ಹುಬ್ಬಳ್ಳಿಯಲ್ಲಿ ಇದ್ದರು. ಅವರು ಕೂಡ ಸುದ್ದಿಗೋಷ್ಠಿಗೆ ನಡೆಸಿದ್ದರು. ಆದರೆ ಎದ್ದುಹೋದ ಪತ್ರಕರ್ತರ ಹೆಸರು ಬರೆದುಕೊಳ್ಳಿ, ನಾನು ಮ್ಯಾನೇಜ್ಮೆಂಟ್ಗೆ ದೂರು ನೀಡುತ್ತೇನೆ ಎಂದ ಡಿ.ಕೆ.ಶಿವಕುಮಾರ್, ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆಯೂ ಕ್ರಮಕೈಗೊಳ್ಳುವಂತೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಸಂಸದೆ ತಿಳಿಸಿದ್ದಾರೆ.