ನವದೆಹಲಿ: ನಮ್ಮೆಲ್ಲರ ಚಟುವಟಿಕೆಗಳನ್ನು ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತಗೊಳಿಸಿರುವ ಕೋವಿಡ್ 19 ಲಾಕ್ಡೌನ್ನ ಬೇಸರ ನೀಗಿಸಿಕೊಳ್ಳಲು ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್ನ ಜನತೆ ಸಂಗೀತಗಾರ ಹಿತೇಶ್ ಮದನ್ ರೂಪದಲ್ಲಿ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ತಮ್ಮಿಬ್ಬರು ಮಕ್ಕಳೊಂದಿಗೆ ಮನೆಯ ಬಾಲ್ಕನಿಗೆ ಬರುವ ಬ್ಯಾಂಡ್ ಯುಫೋರಿಯಾದ ಮಾಜಿ ಸದಸ್ಯ ಹಿತೇಶ್ ಮದನ್, ಪಂಜಾಬಿ ಹಾಡುಗಳಿಂದ ಹಿಡಿದು ಯುಫೋರಿಯಾ ಬ್ಯಾಂಡ್ನ ಹಿಟ್ ಗೀತೆ Maeriವರೆಗೆ ಬಹಳಷ್ಟು ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳನ್ನು ಆಸ್ವಾದಿಸುವ ಜನರು, ಲಾಕ್ಡೌನ್ನ ಬೇಸರ ನೀಗಿಸಿಕೊಳ್ಳುತ್ತಿದ್ದಾರೆ.
ಮದನ್ ಅವರಿಗೆ ಅವರ ಪುತ್ರರಾದ ಆರಿವ್ (12) ಗಿಟಾರ್ ಮತ್ತು ಆದ್ವೈ (11) ಡ್ರಮ್ಸ್ನಲ್ಲಿ ಸಾಥ್ ನೀಡುತ್ತಿದ್ದಾರೆ.
ಅಪ್ಪ ಮತ್ತು ಮಕ್ಕಳ ಆರ್ಕೆಸ್ಟ್ರಾವನ್ನು ಇಷ್ಟಪಟ್ಟು ಜನರು ಹುರಿದುಂಬಿಸಿದ್ದಾರೆ. ಈ ರೀತಿ ನಾವು ಇದುವರೆಗೆ 2 ಬಾರಿ ಬಾಲ್ಕನಿ ಆರ್ಕೆಸ್ಟ್ರಾವನ್ನು ನಡೆಸಿಕೊಟ್ಟಿದ್ದೇವೆ ಎಂದು ಹಿತೇಶ್ ಮದನ್ ತಿಳಿಸುತ್ತಾರೆ.
ತಮ್ಮ ಆರ್ಕೆಸ್ಟ್ರಾವನ್ನು ಮುಂದುವರಿಸಲು ಅಪ್ಪ ಮತ್ತು ಮಕ್ಕಳ ತಂಡ ನಿರ್ಧರಿಸಿದೆ. ಇವರ ಪ್ರಕಾರ ಬಾಲ್ಕನಿ ಆರ್ಕೆಷ್ಟ್ರಾ ಇದುವರೆಗೂ ಅತಿಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರು ಆಸ್ವಾದಿಸಿರುವ ಕಾರ್ಯಕ್ರಮ ಎಂದು ಹೇಳುತ್ತಾರೆ.
ದೆಹಲಿಯಲ್ಲಿ ಬಾಲ್ಕನಿ ಆರ್ಕೆಸ್ಟ್ರಾ ಮಾಡುತ್ತಿರುವವರು ಇವರೊಬ್ಬರೇ ಅಲ್ಲ. ಪೂರ್ವ ದೆಹಲಿಯ ಸ್ವಾಸ್ಥ್ಯ ನಗರದ ಬಿ ಬ್ಲಾಕ್ನ ಗಿಟಾರಿಸ್ಟ್ ಮತ್ತು ಗಾಯಕ ರಾಹುಲ್ ಶರ್ಮ ಕೂಡ ಬಾಲ್ಕನಿ ಆರ್ಕೆಷ್ಟ್ರಾ ನೀಡುತ್ತಿದ್ದಾರೆ. ಮಾ.22ರಂದು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿ, ಸಂಜೆ ಗಂಟೆ, ಜಾಗಟೆ ಹಾಗೂ ಚಪ್ಪಾಳೆ ಬಾರಿಸುವಂತೆ ಮನವಿ ಮಾಡಿಕೊಂಡಿದ್ದಾಗ, ರಾಹುಲ್ ಶರ್ಮ ಸಂಜೆ ಆರ್ಕೆಸ್ಟ್ರಾ ಮೂಲಕ ಕೋವಿಡ್ ವಾರಿಯರ್ಸ್ಗೆ ಅಭಿನಂದನೆ ಸಲ್ಲಿಸಿದ್ದರು.
ಪ್ರಧಾನಿ ಅವರ ಆಶಯದಂತೆ ಚಪ್ಪಾಳೆ ತಟ್ಟಲು ಎಲ್ಲರೂ ಬಾಲ್ಕನಿಗೆ ಬಂದಾಗ ಜನರ ಮುಖದಲ್ಲಿ ಒಂದು ಬಗೆಯ ಸಂತೋಷ ನೆಲೆಸಿತ್ತು. ಇದನ್ನು ಗಮನಿಸಿದ ನಾನು ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಗ್ರೂಪ್ಗೆ ಸಂದೇಶ ರವಾನಿಸಿ, ಆರ್ಕೆಸ್ಟ್ರಾ ಬಗ್ಗೆ ತಿಳಿಸಿದೆ. ಸಂಘಗಳ ಸದಸ್ಯರು ಇದಕ್ಕೆ ತುಂಬು ಹೃದಯದಿಂದ ಸ್ಪಂದಿಸಿ, ಕಾರ್ಯಕ್ರಮ ವೀಕ್ಷಿಸಿ ಸಂಭ್ರಮಸಿದ್ದಲ್ಲದೆ, ಪ್ರೋತ್ಸಾಹಿಸಿದರು ಎಂದು ರಾಹುಲ್ ಶರ್ಮ ಹೇಳುತ್ತಾರೆ.
ಇದೀಗ ಲಾಕ್ಡೌನ್ ಅವಧಿಯಲ್ಲಿ ತಾವು ಈಗಾಗಲೆ ನಾಲ್ಕೈದು ಬಾರಿ ಬಾಲ್ಕನಿ ಆರ್ಕೆಷ್ಟ್ರಾಗಳನ್ನು ನಡೆಸಿಕೊಟ್ಟಿರುವುದಾಗಿ ತಿಳಿಸುತ್ತಾರೆ.