ಬಾಗಲಕೋಟೆ: ಸಾಯಿಪ್ರೀಯಾ ಸಕ್ಕರೆ ಕಾರ್ಖಾನೆಯ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಜತೆಗೆ ಜಮೀನುಗಳು ಕೂಡಾ ಹಾಳಾಗುತ್ತಿವೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡದೇ ಹೋದಲ್ಲಿ ಧರಣಿ ನಡೆಸಲಾಗುವುದು ಎಂದು ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ರೈತರು ಎಚ್ಚರಿಕೆ ನೀಡಿದರು.
ನಿರಾಣಿ ಕಂಪನಿ ಒಡೆತನದ ಸಾಯಿಪ್ರೀಯ ಸಕ್ಕರೆ ಅಕಪಕ್ಕದಲ್ಲಿ ನಮ್ಮ ಜಮೀನುಗಳು ಇದ್ದು, ನಿತ್ಯವು ಕಾರ್ಖಾನೆಯು ತ್ಯಾಜ್ಯ ವಸ್ತುಗಳಾದ ಬೂದಿ, ಮಳ್ಳಿ, ಪ್ಲಾಸ್ಟಿಕ್ ರಾಶಿ ರಾಶಿಯಾಗಿ ಹಾಕುತ್ತಿದೆ. ಇದರಿಂದ ಭಿತ್ತನೆ ಮಾಡುವುದು ಕಷ್ಟವಾಗುತ್ತಿದೆ. ತ್ಯಾಜ್ಯದಿಂದ ಬೆಳೆಗಳು ನಾಶವಾಗುತ್ತಿವೆ. ಈ ಬಗ್ಗೆ ಕಾರ್ಖಾನೆ ಮಾಲೀಕರಾದ ಸಂಗಮೇಶ ನಿರಾಣಿ, ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹಾಗೂ ಬಾಗಲಕೋಟೆ ಪರಿಸರ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಲಾಗಿದೆ. ಅಲ್ಲದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ರೂಪದಲ್ಲಿ ಲಿಖಿತ ದೂರು ನೀಡಲಾಗಿದೆ. ಆದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಮೀನು ನಂಬಿಕೊಂಡು ಬದುಕುತ್ತಿರುವ ನಮಗೆಲ್ಲ ಇಂದು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ದುವಾರ್ಸನೆ, ತ್ಯಾಜ್ಯದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ನಮ್ಮ ಸಮಸ್ಯೆಗೆ ಸ್ಪಂದಿಸದೆ ಹೋದಲ್ಲಿ ಜ.30 ರಂದು ಬಾಗಲಕೋಟೆ ಪರಿಸರ ಇಲಾಖೆ ಎದುರು ಧರಣಿ ನಡೆಸಲಾಗುವುದು ಎಂದು ಮೈಗೂರ ಗ್ರಾಮದ ರೈತರಾದ ಮಹದೇವ ಭೀಮನಹಳ್ಳಿ, ಶಿವಪ್ಪ ತಾಳಿಕೋಟಿ, ಪರಸಪ್ಪ ಅಂಬಿ, ಗುರುಪುರ ಭೀಮನಹಳ್ಳಿ, ಬಾಹುಷಾ ತೇಲಸಂಗ ತಿಳಿಸಿದರು.