ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿವಿಡಿ ಹಾಗೂ ಭಾನುವಾರ ಸುರಿದ ಧಾರಾಕಾರ ಮಳೆ ಭಾರಿ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಿದೆ.
ಮಲಪ್ರಭಾ ನದಿಯಲ್ಲಿ ರೈತನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಕಿರುಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಕೊಣ್ಣೂರ ಗ್ರಾಮದ ರೈತ ಬಾಪುಗೌಡ ಸಾಲಿಗೌಡ್ರ(40) ಕೊಚ್ಚಿಕೊಂಡು ಹೋಗಿದ್ದಾರೆ. ಗುಳೇದಗುಡ್ಡ ತಾಲೂಕಿನ ಕೆಲವಡಿ ಕೆರೆ ತುಂಬಿ ಹರಿದು ಗ್ರಾಮದಲ್ಲಿ ನೀರು ನುಗ್ಗಿದೆ. ಕೆರೆ ನೀರು ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಆವರಿಸಿ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಅತಿಯಾದ ಮಳೆಯಿಂದಾಗಿ ಬೀಳಗಿ ತಾಲೂಕಿನ ಕೊಪ್ಪ ಎಸ್ಕೆ ಗ್ರಾಮದ ವೆಂಕಟೇಶ ಪಾಟೀಲ ಅವರ ಹೊಲದಲ್ಲಿರುವ ಬೋರ್ವೆಲ್ ಚಿಮ್ಮುತ್ತಿದೆ. ಅಂದಾಜು 8 ಇಂಚ್ ನೀರು ಪಂಪ್ಸೆಟ್ ಇಲ್ಲದೆ ಹೊರಹೊಮ್ಮುತ್ತಿದೆ. ಪ್ರಸಿದ್ಧ ತುಳಸಿಗೇರಿ ಆಂಜನೇಯ ದೇವಸ್ಥಾನ ಸುತ್ತ ಮಳೆ ನೀರು ಆವರಿಸಿದೆ. ದೇವಸ್ಥಾನದ ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿದೆ. ಸಭಾಭವನ,ಅತಿಥಿಗೃಹ ಜಲಾವೃತವಾಗಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದಲ್ಲಿ ಎರಡು ನೂರಕ್ಕೂ ಹೆಚ್ಚು ಎಕರೆ ಗೋವಿನಜೋಳ, ಕಬ್ಬು ಬೆಳೆ ಮಳೆಗಾಳಿಗೆ ನೆಲಕ್ಕುರುಳಿದೆ.