ಬಾಗಲಕೋಟೆ: ಕರೊನಾ ಎರಡನೇ ಅಲೆಯಿಂದ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಮೂರು ದಿನಗಳಿಗೆ ಆಗುವಷ್ಟು ಅಗತ್ಯವಿರುವ 20 ಕೆಎಲ್ ಆಕ್ಸಿಜನ್ ಸಂಗ್ರಹಿಸಿಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಗೆ ಈಗಾಗಲೇ 15 ಕೆಎಲ್ ಆಕ್ಸಿಜನ್ ಬಂದಿದ್ದು, ಹೆಚ್ಚುವರಿಯಾಗಿ ಇನ್ನು 15 ಕೆಎಲ್ ಆಕ್ಸಿಜನ್ ಬರಲಿದೆ. ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳವರು ಆಕ್ಸಿಜನ್ ಸಿಲಿಂಡರ್ಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಎಂ.ಎಸ್.ಪಿ.ಎಲ್. ಅವರಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ಸೇರಿ ಒಟ್ಟು 80 ಜಂಬೋ ಸಿಲಿಂಡರ್ಗಳನ್ನು ಪ್ರತಿ ದಿನ ನೀಡಲು ಒಪ್ಪಿರುವುದಾಗಿ ತಿಳಿಸಿದರು.
ಜಿಲ್ಲೆಯ ಬಾದಾಮಿ, ಹುನಗುಂದ ಹಾಗೂ ಗುಳೇದಗುಡ್ಡ ತಾಲೂಕುಗಳಲ್ಲಿ 3570 ವಲಸೆ ಕಾರ್ಮಿಕರು ಆಗಮಿಸಿದ್ದು, ಅವರಿಗೆಲ್ಲ ಔಷಧ ಕಿಟ್ ನೀಡಲಾಗಿದೆ. 2700 ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಲಾಗಿದೆ. ಅಲ್ಲದೆ, ಉದ್ಯೋಗ ಖಾತ್ರಿಯಡಿ ಉದ್ಯೋಗ ಸಹ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಹೋಮ್ ಕ್ವಾರಂಟೈನ್ಗೆ ಬಳಕೆ ಮಾಡಲು ತಿಳಿಸಿದರು. ಸಣ್ಣ ಕುಟುಂಬದಲ್ಲಿ ಒಂದೇ ಶೌಚಗೃಹ, ಸ್ನಾನ ಗೃಹ ಹೊಂದಿದವರ ಮನೆಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಅಂತವರನ್ನು ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಜಿಲ್ಲೆಗೆ ಹೊಸ ಆರ್ಟಿಪಿಸಿಆರ್ ಯಂತ್ರ
ಕೋವಿಡ್ ಸ್ಯಾಂಪಲ್ಗಳನ್ನು ಪರೀಕ್ಷೆಯ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಗೆ ಹೆಚ್ಚುವರಿಯಾಗಿ ಮತ್ತೊಂದು ಆರ್.ಟಿ.ಪಿ.ಸಿ.ಆರ್. ಹಾಗೂ ಎ.ಎಂ.ಆರ್. ಎಕ್ಸಟ್ರಾಕ್ಟರ್ ಯಂತ್ರ ಬರಲಿದೆ. ಇದರಿಂದ ಈಗಿರುವ ಸ್ಯಾಂಪಲ್ಗಳ ಪರೀಕ್ಷೆಗಿಂತ ದಿನಕ್ಕೆ ಇನ್ನು ಹೆಚ್ಚಿನ ಪರೀಕ್ಷೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಎನ್ಐಸಿ ಪೋರ್ಟಲ್ನಲ್ಲಿ ಬೆಡ್ಗಳ ಮಾಹಿತಿ
ಜಿಲ್ಲೆಯಲ್ಲಿ 343 ಜನರಲ್ ಬೆಡ್, 8 ಐ.ಸಿ.ಯು ಬೆಡ್, 6 ಎಚ್.ಡಿ.ಯು ಬೆಡ್, 6 ಆಕ್ಸಿಜನ್ ಬೆಡ್ ಸೇರಿ ಒಟ್ಟು 363 ಬೆಡ್ಗಳು ಖಾಲಿ ಇರುತ್ತವೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ 135 ರಿಂದ 240 ಕ್ಕೆ ಆಕ್ಸಿಜನ್ ಬೆಡ್ಗಳು ಸಿದ್ಧಗೊಳ್ಳುತ್ತಿರುವ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ಅವರು ತಿಳಿಸಿದ್ದಾರೆ. ಬೆಡ್ಗಳ ನಿರ್ವಹಣೆಗೆ ಜಿಲ್ಲಾಡಳಿತದಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ಸೌಲಭ್ಯಗಳ ಬೆಡ್ಗಳ ಮಾಹಿತಿಯನ್ನು ವೆಬ್ ಪೋರ್ಟಲ್ ಮೂಲಕ ಕ್ಷಣಕ್ಷಣಕ್ಕೂ ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೋಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಎನ್.ಐ.ಸಿಯ ಗಿರಿಯಾಚಾರ ಇತರರು ಉಪಸ್ಥಿತರಿದ್ದರು.
ಮದುವೆಗಳಿಂದಲೂ ಸಹ ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಮದುವೆ ಕಾರ್ಯಕ್ರಮಕ್ಕೆ ನೀಡುತ್ತಿರುವ ನಿರಾಕ್ಷೇಪಣಾ ಪತ್ರ ಹಾಗೂ ಅನುಮತಿಯನ್ನು ರದ್ದುಪಡಿಸಲಾಗಿದೆ. ಈಗಾಗಲೇ ನಿರಾಕ್ಷೇಪಣಾ ಪತ್ರ ಹಾಗೂ ಅನುಮತಿ ಪಡೆದ ಮದುವೆ ಆಯೋಜಕರು 50 ಜನಕ್ಕಿಂತ ಹೆಚ್ಚಿನ ಜನ ಸೇರಿಸುವಂತ್ತಿಲ್ಲ. ಅಲ್ಲದೆ, ಕಾಲಕಾಲಕ್ಕೆ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
– ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ
ನಿತ್ಯ 500 ರೆಮ್ಡಿಸಿವಿರ್ಗೆ ಬೇಡಿಕೆ
ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಪ್ರತಿದಿನ 120 ರಿಂದ 130 ವರೆಗೆ ರೆಮ್ಡಿಸಿವಿರ್ ಅವಶ್ಯವಿದ್ದು, ಈಗಾಗಲೇ ಮಾ. 15 ರಿಂದ ಇಲ್ಲಿವರೆಗೆ 2987 ಚುಚುಮದ್ದು ಸ್ವೀಕೃತಿಯಾದರೆ, ಈ ಪೈಕಿ 2955 ಉಪಯೋಗಿಸಲಾಗಿದೆ. 32 ಚುಚುಮದ್ದು ಮಾತ್ರ ಲಭ್ಯವಿರುತ್ತದೆ. ಪ್ರತಿದಿನ 500 ರೆಮ್ಡಿಸಿವಿರ್ ಬೇಡಿಕೆ ಇದ್ದು, ಏಪ್ರಿಲ್ 22 ರಿಂದ ಇಲ್ಲಿಯವರೆಗೆ 3179 ರೆಮ್ಡಿಸಿವಿರ್ ಪೂರೈಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ 18 ರೆಮ್ಡಿಸಿವಿರ್ ಲಭ್ಯವಿದ್ದು, ರೋಗಿಗಳಿಗೆ ಮಾತ್ರ ಬಳಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಾಸ್ಕ್ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಸಿದ 76014 ಜನರಿಂದ ಒಟ್ಟು 73,11,289 ರೂ. ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಸಿದ 28 ಮದುವೆಗಳ ವಿರುದ್ಧ ಪ್ರಕರಣದ ದಾಖಲಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡುವ ವರ್ತಕರ ವಿರುದ್ಧ ವಿಶೇಷ ತಂಡದ ಮೂಲಕ 16 ಕಡೆ ದಾಳಿ ಮಾಡಿ 53,500 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.