ಆಧುನಿಕತೆಯ ಮತ್ತಿನಲ್ಲಿ ಮೈಮರೆತಿದ್ದ ಮಾನವನಿಗೆ ನೋವೆಲ್ ಕರೊನಾ ವೈರಸ್ ಜೀವನದ ಪಾಠ ಕಲಿಸಿದೆ. ಚೀನಾದ ವುಹಾನ್ ನಲ್ಲಿ ಜನ್ಮತಳೆದ ಈ ಮಹಾಮಾರಿ ವೈರಸ್ (ಕೋವಿಡ್-19) ವಿಶ್ವವ್ಯಾಪಿಯಾಗಿ ಮಾನವನನ್ನು ತನ್ನ ಕದಂಬ ಬಾಹುಗಳಲ್ಲಿಟ್ಟುಕೊಂಡಿದೆ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಭಾರತ ಸೇರಿದಂತೆ ಜಗತ್ತು ಕೊರೋನಾ ಹೊಡೆತಕ್ಕೆ ತತ್ತರಿಸಿ ಹೋಗಿದೆ. ದೇಶದ ಆರ್ಥಿಕತೆಗಳು ಕುಸಿದಿವೆ. ಜನರ ಜೀವನವನ್ನಂತೂ ಮೂರಾಬಟ್ಟೆಯನ್ನಾಗಿಸಿದೆ. ಲಾಕ್ ಡೌನ್ ಪರಿಣಾಮ ವಿವಿಧ ಸಂಸ್ಥೆಗಳು ಬಾಗಿಲು ಮುಚ್ಚಿದ್ದರಿಂದ ಸಾವಿರಾರು ಉದ್ಯೋಗಿಗಳು ಮುಂಬರುವ ದಿನಗಳು ಎದುರಿಸುವುದು ಸವಾಲಾಗಿದೆ. ದಿನದ ಸಂಪಾದನೆಯನ್ನೇ ನಂಬಿಕೊಂಡಿದ್ದ ಬೀದಿಬದಿ ಪ್ಯಾಪಾರಿಗಳು, ಕೂಲಿಕಾರ್ಮಿಕರು, ವಲಸೆ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರಿತಪಿಸುವಂತಾಗಿತ್ತು. ಈ ವೇಳೆ ಸರ್ಕಾರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ತೊಂದರೆಗೊಳಗಾದವರ ನೆರವಿಗೆ ಸಹಾಯ ಹಸ್ತ ಚಾಚಿದರು. ಅಂತಹ ಸಂಸ್ಥೆಗಳಲ್ಲಿ ಬೆಂಗಳೂರು ಅಭಿವೃದ್ಧಿಗೆ ಅವಿರತವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಲ್ಲಿ ಬಿ.ಪ್ಯಾಕ್ ಸಹ ಒಂದು.
ಏನಿದು ಬಿ.ಪ್ಯಾಕ್:
ಬಿ.ಪ್ಯಾಕ್ (ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿ), ಪಕ್ಷಾತೀತ ನಾಗರಿಕರ ಗುಂಪು. ಬೆಂಗಳೂರಿನ ಆಡಳಿತನ್ನು ಸುಧಾರಿಸುವ ಹಾಗೂ ನಗರದ ಜನರ ಜೀವನಮಟ್ಟವನ್ನು ಹೆಚ್ಚಿಸುವ ಗುರಿ ಇದರದ್ದು. ಬಿ.ಪ್ಯಾಕ್ ಹೆಸರಿನಲ್ಲಿ ರಾಜಕೀಯ ಎಂಬ ಪದವಿದೆಯಾದರೂ ರಾಜಕೀಯದಿಂದ ದೂರ ದೂರ. ಇದೊಂದು ಪಕ್ಕಾ ಲಾಭರಹಿತ ಸರ್ಕಾರೇತರ ಸಂಸ್ಥೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರು ಆಡಳಿತವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ತಳಮಟ್ಟದ ನಾಗರಿಕ ನಾಯಕರನ್ನು ರೂಪಿಸುವುದೇ ಬಿ.ಪ್ಯಾಕ್ನ ಪರಮ ಉದ್ದೇಶ. ಬೆಂಗಳೂರಿಗರ ಜೀವನ ಮಟ್ಟ ಸುಧಾರಿಸಲು ನೆರವಾಗುವ ಹಲವು ಕಾರ್ಯಕ್ರಮಗಳನ್ನು ಈ ಸಂಸ್ಥೆ ಕೈಗೊಳ್ಳುತ್ತದೆ. ಅದಕ್ಕೆ ಬೇಕಾದ ಕ್ರಿಯಾ ಯೋಜನೆಗಳನ್ನು ಕಾಲಕಾಲಕ್ಕೆ ರೂಪಿಸಿ ಸರ್ಕಾರಕ್ಕೂ ಸಲ್ಲಿಸುವ ಕಾರ್ಯ ಮಾಡುತ್ತದೆ.
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಸಮರೋಪಾದಿಯಲ್ಲಿ ಕಾರ್ಯ:
ಕೊರೊನಾ ಬಿಕ್ಕಟ್ಟು ಪ್ರಾರಂಭವಾದಾಗಿಂದ ತನ್ನದೇ ಆದ ರೀತಿಯಲ್ಲಿ ಬಿ.ಪ್ಯಾಕ್ ಹಾಗೂ ಬಿ.ಕ್ಲಿಪ್ ನಾಗರಿಕ ನಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್ ಡೌನ್ ಸಂಕಷ್ಟದಲ್ಲಿ ಕಷ್ಟನಷ್ಟಗಳನುಭವಿಸಿದವರಿಗೆ ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿ, ಪೊಲೀಸರು, ಬಿಬಿಎಂಪಿ ಸಿಬ್ಬಂದಿಗಳ ಸುರಕ್ಷತೆಗಾಗಿ ತನ್ನ ಕೈಲಾದ ಸಹಾಯ ಮಾಡುತ್ತಿದೆ. ಸಂಸ್ಥೆ ಪ್ರಾರಂಭವಾದ ಎಂಟು ವರ್ಷಗಳಲ್ಲಿ ಹಲವು ಮಹತ್ತರಗಳನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿದೆ.
ಕೊರೊನಾ ಸಮಯದಲ್ಲಿ ಬಿ.ಪ್ಯಾಕ್ ಸೇವೆ
ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದವರ ನೋವಿಗೆ ಬಿ.ಪ್ಯಾಕ್ ತನ್ನದೇ ರೀತಿಯಲ್ಲಿ ಸ್ಪಂದಿಸಿದೆ. ಕಾಗ್ನಿಜೆಂಟ್ ಫೌಂಡೇಷನ್, ಬಯೋಕಾನ್ ಫೌಂಡೇಷನ್, ಟಿಇ ಕನೆಕ್ಟಿವಿಟಿ, ಕ್ವೆಸ್, ಎಸ್ ವಿ ಪಿ ಇಂಡಿಯಾ, ಆರ್ ಟಿ ಐ ಟಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಲವು ಜನೋಪಕಾರಿ ಕಾರ್ಯಗಳನ್ನು ನಡೆಸಿದೆ. ಸಂಪಂಗಿರಾಮನಗರ, ಕಲ್ಕೆರೆ, ಸಿ.ವಿ ರಾಮನ್ ನಗರ, ಜಕ್ಕೂರು, ಕೆ.ಆರ್ ಪುರಂ, ಶಿವಾಜಿ ನಗರ, ಮಹಾಲಕ್ಷ್ಮಿಪುರಂ ಲೇಔಟ್ ಸೇರಿದಂತೆ ನಗರದ 60 ಕ್ಕೂ ವಾರ್ಡ್ ಗಳಲ್ಲಿನ ಬಡವರು, ವಲಸೆ ಕಾರ್ಮಿಕರು, ನಿರ್ಗತಿಕರಿಗೆ 20,000 ಸಾವಿರಕ್ಕೂ ಹೆಚ್ಚು ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಿದೆ. ಈ ಮೂಲಕ ಬಡವರು, ನಿರ್ಗತಿಕರಿಗೆ ತನ್ನ ಕೈಲಾದ ಸಹಾಯ ಮಾಡಿದೆ.
ಕೊರೊನಾ ವಿರುದ್ಧ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರು, ವೈದ್ಯರು, ದಾದಿಯರಿಗೆ ಸಹಾಯಕವಾಗುವಂತೆ 10,000 ಫೇಸ್ ಶೀಲ್ಡ್, 300 ಕೈಗವಸುಗಳು, ಫೇಸ್ ಮಾಸ್ಕ್,, ಪಿಪಿಇ ಕಿಟ್ ಗಳ ಜೊತೆಗೆ 100 ಸ್ಯಾನಿಟೈಸರ್ ಬಾಟಲ್ ಗಳನ್ನು ವಿತರಿಸಿದೆ. ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳಿಗೆ ಬರುವ ಜನಸಾಮಾನ್ಯರು, ಸಿಬ್ಬಂದಿಗಳ ದೇಹದ ಉಷ್ಣತೆ ಪರಿಶೀಲಿಸಲು ಸಹಾಯವಾಗಲು 95 ಕಾಂಟ್ಯಾಕ್ಟ್ ಲೆಸ್ ಥರ್ಮಲ್ ಸ್ಕ್ಯಾನರ್ (ದೇಹದ ಉಷ್ಣತೆ ತಪಾಸಣಾ ಯಂತ್ರ) ಗಳನ್ನು ಬಿಬಿಎಂಪಿ ಮೂಲಕ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಿದೆ.
ಕೊರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ವಿಶೇಷವಾಗಿ ಸಿದ್ಧಪಡಿಸಿದ 1,175 ಫೇಸ್ ಶೀಲ್ಡ್ ಗಳನ್ನು ವಿತರಿಸಿದೆ. ನಗರದ ಬಹುತೇಕ ವಾರ್ಡ್ ಗಳಲ್ಲಿ ಬಿ.ಪ್ಯಾಕ್ನ ನಾಗರಿಕ ನಾಯಕರ ಮೂಲಕ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ 46,000ಕ್ಕೂ ಹೆಚ್ಚುಆಹಾರ ಪೊಟ್ಟಣಗಳನ್ನು ವಿತರಿಸಿದೆ. ಇವುಗಳನ್ನೆಲ್ಲಾ ನೀಡಲು ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಯಾವುದೇ ಪ್ರಚಾರ ಬಯಸದೆ ತನ್ನದು ಅಳಿಲು ಸೇವೆ ಎಂದು ನಿಸ್ವಾರ್ಥ ಮನೋಭಾವದಿಂದ ತನ್ನ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿದೆ.
ಕೊರೋನಾ ಸೋಂಕು ಹರಡುತ್ತಿರುವ ಸಂದಿಗ್ಧ ಕಾಲದಲ್ಲಿ ಬಡವರಿಗೆ, ಅಸಹಾಯಕರಿಗೆ ಸೇವೆ ಸಲ್ಲಿಸುತ್ತಿರುವ ಬಿ.ಪ್ಯಾಕ್ ತನ್ನದೇ ಧ್ಯೆಯೋದ್ದೇಶಗಳನ್ನು ಹೊಂದಿದೆ. ತನ್ನ ವಿಭಿನ್ನ ಕ್ರಿಯಾ ಯೋಜನೆಗಳ ಮೂಲಕ ವಿಶ್ವದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವನ್ನು ಜಗತ್ತಿನ ಸುಸ್ಥಿರ ನಗರವನ್ನಾಗಿ ರೂಪಿಸುವ ಗುರಿಯನ್ನು ಬಿ.ಪ್ಯಾಕ್ ಹೊಂದಿದೆ. ಅದಕ್ಕೆ ಪೂರಕವಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಸಿವಿಕ್ ಲೀಡರ್ಸ್ ಬೆಂಗಳೂರಿಗೆ ಬಿ.ಪ್ಯಾಕ್ ಕೊಡುಗೆ:
ಕೋವಿಡ್ ಸಮಯದಲ್ಲಿ ಬಿ.ಪ್ಯಾಕ್ನ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಬಿ.ಕ್ಲಿಪ್ ನ ನಾಗರಿಕ ನಾಯಕರು. ಬಿ.ಪ್ಯಾಕ್ ನ ಪ್ರತಿಷ್ಠಿತ ಕಾರ್ಯಕ್ರಮವಾದ ಬಿ.ಕ್ಲಿಪ್ ನ ನಾಗರಿಕ ನಾಯಕತ್ವ ತರಬೇತಿ ಕಾರ್ಯಾಗಾರಲ್ಲಿ ತರಬೇತಿ ಪಡೆದ ಇವರು, ನಗರದ 198 ವಾರ್ಡ್ ಗಳ ಪೈಕಿ 126 ವಾರ್ಡ್ ಗಳಲ್ಲಿ 263 ಮಂದಿ ಇದ್ದಾರೆ. ಇವರಲ್ಲಿ 190 ಪುರುಷರು 73 ಮಹಿಳೆಯರು. ಇವರಲ್ಲಿ ಕೆಲವರು ವಿವಿಧ ರಾಜಕೀಯ ಪಕ್ಷಗಳಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮ್ಮ ವಾರ್ಡ್ ಮಟ್ಟದ ಸಮಸ್ಯೆಗಳನ್ನು ಅವರೇ ಬಗೆಹರಿಸುವ ಕಾರ್ಯವನ್ನು ಮಾಡುತ್ತಾ ಸಾಮಾನ್ಯ ಜನರ ಸಂಕಷ್ಟಗಳನ್ನು ನಿವಾರಿಸುತ್ತಿದ್ದಾರೆ. ಬಿ.ಪ್ಯಾಕ್ ವಿವಿಧ ಯೋಜನೆಗಳ ನೆರವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅವರ ಕಾರ್ಯ ಅಮೋಘ ಹಾಗೂ ಶ್ಲಾಘನೀಯ. ಬೆಂಗಳೂರಿಗೆ ಬಿ.ಪ್ಯಾಕ್ ನ ಕೊಡುಗೆ ಈ ಸಿವಿಕ್ ಲೀಡರ್ಸ್ ಎಂದರೆ ತಪ್ಪಾಗಲಾರದು. ಬಿಪ್ಯಾಕ್ ನ ದಿನಸಿ ಪದಾರ್ಥಗಳ ಕಿಟ್ಗಳು, ಊಟದ ಪೊಟ್ಟಣಗಳನ್ನು ಅರ್ಹರಿಗೆ ತಲುಪಿಸುವಂತೆ ಮಾಡಿದ್ದಲ್ಲಿ ಇವರ ಸೇವೆ ಅನನ್ಯ. ಕೊರೊನಾ ವೈರಸ್ಗೆ ಹೆದರಿ ಎಲ್ಲರೂ ಮನೆಗಳಲ್ಲಿದ್ದಾಗ ಕುಟುಂಬದವರ ಹೆದರಿಕೆಯ ಮಾತುಗಳನ್ನು ಲೆಕ್ಕಿಸದೆ ಸಮಾಜ ಸೇವೆಯಲ್ಲಿನಾಗರಿಕ ನಾಯಕರು ತೊಡಗಿಕೊಂಡಿದ್ದನ್ನು ಮೆಚ್ಚಲೇಬೇಕು.
ಒಟ್ಟಾರೆ ಬೆಂಗಳೂರು ನಗರದ ಸುಸ್ಥಿರ ಸರ್ವತೋಮುಖ ಅಭಿವೃದ್ಧಿಗೆ ಬಿ.ಪ್ಯಾಕ್ನ ನಿಸ್ವಾರ್ಥ ಸೇವೆ ಮೆಚ್ಚುವಂತದ್ದು. ಜಗತ್ತಿನ ಡೈನಮಿಕ್ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೆಂಗಳೂರು ಅಭಿವೃದ್ಧಿಯಾದಂತೆ ಸಮಸ್ಯೆಗಳ ಸರಮಾಲೆಯೂ ಬೆಳೆಯುತ್ತಿದೆ. ನಗರದ ಅಭಿವೃದ್ಧಿಗೆ ಇಂತಹ ಸಂಸ್ಥೆಗಳ ಅವಶ್ಯಕತೆ ಹಿಂದಿಗಿಂತಲೂ ಈಗ ಅಧಿಕವಾಗಿದೆ.
ಬೆಂಗಳೂರಿನ ಸುಸ್ಥಿರ ಅಭಿವೃದ್ಧಿ ನಮ್ಮ ಆಶಯ. ಲಾಕ್ ಡೌನ್ ಸಮಯದಲ್ಲಿ ನಮ್ಮ ಸಿವಿಕ್ ಲೀಡರ್ಸ್ ಕಾರ್ಯದ ಬಗ್ಗೆ ಹೆಮ್ಮೆಯಿದೆ. ನಗರಕ್ಕೆ ಇಂತಹ ಸಾವಿರಾರು ನಾಯಕರನ್ನು ರೂಪಿಸುವುದು ನಮ್ಮಗುರಿ.
| ರೇವತಿ ಅಶೋಕ್, ಬಿ.ಪ್ಯಾಕ್ ಸಿಇಒ
ಬಿ.ಪ್ಯಾಕ್ ಸಂಸ್ಥೆಯು ರಾಜಕೀಯ ನಾಯಕರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೊರೊನಾ ವೈರಾಣು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ಕೊರೊನಾ ಸೇನಾನಿಗಳಿಗೆ, ಬಡವರಿಗೆ, ವಲಸೆ ಕಾರ್ಮಿಕರಿಗೆ ಆಹಾರ, ದವಸ ಧಾನ್ಯಗಳನ್ನು ಹಂಚುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ.
| ಗೌತಮ್ ಕುಮಾರ್, ಬಿಬಿಎಂಪಿ ಮೇಯರ್
ನಮ್ಮ ವಾರ್ಡ್ ನಲ್ಲಿ ಒಬ್ಬ ನಾಯಕನಾಗಿ ಗುರುತಿಸಿಕೊಳ್ಳಲು ಬಿ.ಪ್ಯಾಕ್ ಸಹಕಾರ ಅನನ್ಯ. ಲಾಕ್ ಡೌನ್ ಸಂದರ್ಬದಲ್ಲಿ ಬಿ.ಪ್ಯಾಕ್ ಸಹಕಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಬಿ.ಪ್ಯಾಕ್ ಭಾಗವಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ.
|ಸಂಪತ್ ಸಿ, ಪ್ರಧಾನ ಕಾರ್ಯದರ್ಶಿಗಳು ಆದರ್ಶ ಆಟೋ ಯೂನಿಯನ್