More

    ಸೋನಿಯಾ ಆರೋಗ್ಯಕ್ಕಾಗಿ ಪೂಜಾರಿ ಟೆಂಪಲ್ ರನ್ : ಕುದ್ರೋಳಿ ದೇಗುಲ, ಉಳ್ಳಾಲ ದರ್ಗಾಕ್ಕೆ ಮೊರೆ

    ಮಂಗಳೂರು: ಅನಾರೋಗ್ಯದಿಂದ ನವದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯ ಸುಧಾರಣೆಗಾಗಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಉಳ್ಳಾಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆ ಮೂಲಕ ಅವರು ಗಾಂಧಿ ಕುಟುಂಬ ಬಗೆಗೆ ತಮ್ಮ ನಿಷ್ಠೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಕುದ್ರೋಳಿಯಲ್ಲಿ ಪ್ರಾರ್ಥನೆ ಬಳಿಕ ಮಾತನಾಡಿದ ಅವರು, ಸೋನಿಯಾ ಗಾಂಧಿ ಕುಟುಂಬ ಕುದ್ರೋಳಿ ಕ್ಷೇತ್ರದ ಭಕ್ತರು. 2012ರಲ್ಲಿ ಕ್ಷೇತ್ರದ ಶತಮಾನೋತ್ಸವ ಸಮಾರಂಭಕ್ಕೆ ಸೋನಿಯಾ ಚಾಲನೆ ನೀಡಿದ್ದರು. ಅವರನ್ನು ಬದುಕಿಸು ಎಂದು ಪ್ರಾರ್ಥಿಸಿದ್ದೇವೆ ಎಂದರು. ಬಳಿಕ ಉಳ್ಳಾಲ ದರ್ಗಾಕ್ಕೆ ತೆರಳಿದರು. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಸೋನಿಯಾ ಗಾಂಧಿ ಮತ್ತು ಅವರ ಅಳಿಯ ರಾಬರ್ಟ್ ಅವರಿಗಾಗಿ ಕಳೆದ ಜುಲೈನಲ್ಲಿಯೂ ಪೂಜಾರಿ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

    ಮತ್ತೆ ಪ್ರತಿಜ್ಞೆ: ಸೋನಿಯಾ ಗಾಂಧಿ ಮೂರು ದಿನ ದೊಳಗೆ ಗುಣಮುಖರಾಗದಿದ್ದರೆ ಇನ್ನು ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸುವುದಿಲ್ಲ ಎಂದು ಜನಾರ್ದನ ಪೂಜಾರಿ ಸೋಮವಾರ ಪ್ರತಿಜ್ಞೆ ಕೈಗೊಂಡರು. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಪ್ರಾರ್ಥಿಸಿದ್ದ ಪೂಜಾರಿ, ಗೆಲುವಾಗದಿದ್ದರೆ ಕುದ್ರೋಳಿ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಮಿಥುನ್ ರೈ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರು, ಭಕ್ತರು ಮನ ವೊಲಿಸಿದ ನಂತರವೇ ಅವರು ಕ್ಷೇತ್ರಕ್ಕೆ ಬಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts