ದಾವಣಗೆರೆ: ಮದುವೆಗೆ ಬಂದ ಮಹಿಳೆಯೊಬ್ಬರು ವಾಪಸ್ ಮನೆಗೆ ಹೋಗುವಾಗ ಕಳೆದಿಕೊಂಡು ಹೋಗಿದ್ದು ಮೂರೂವರೆ ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಪತ್ತೆ ಮಾಡುವಲ್ಲಿ ನಗರದ ಆಟೋ ಚಾಲಕರೊಬ್ಬರು ಪೊಲೀಸರಿಗೆ ನೆರವಾಗಿದ್ದಾರೆ.
ಇಲ್ಲಿನ ರಾಮಕೃಷ್ಣ ಹೆಗಡೆ ನಗರದ ಸುಬಾನ್ ಖಲೀಲ್ ಸಾಬ್ ಸಹಾಯ ಮಾಡಿದವರು. ಚಿತ್ರದುರ್ಗದ ಹಿಮ್ಮತ್ ನಗರದ ಅಶ್ಮತ್ ಉನ್ನೀಸಾ ಎಂಬಾಕೆ ಭಾನುವಾರ ದಾವಣಗೆರೆ ನಗರದ ಸುಲ್ತಾನ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ನಡೆದ ಸಂಬಂಧಿಕರ ಮದುವೆಗೆ ಆಟೋದಲ್ಲಿ ಬಂದಿದ್ದರು. ಆಟೋದಿಂದ ಇಳಿಯುವಾಗ ಚಿನ್ನದ 2 ನೆಕ್ಲೆಸ್, ಕಿವಿಯೋಲೆಗಳು ಸೇರಿ 7 ತೊಲ ಆಭರಣಗಳಿದ್ದ ವ್ಯಾನಿಟಿ ಬ್ಯಾಗನ್ನು ಮರೆತು ಬಿಟ್ಟಿದ್ದರು.
ನಂತರ ಬಂದು ಆಟೋವನ್ನು ಹುಡುಕಿದಾಗ ಅದರಲ್ಲಿ ವ್ಯಾನಿಟಿ ಬ್ಯಾಗ್ ಇರಲಿಲ್ಲ. ಮತ್ತೊಬ್ಬ ಪ್ರಯಾಣಿಕರು ಅದನ್ನು ತೆಗೆದುಕೊಂಡು ಹೋಗಿದ್ದರು. ಇದ್ಯಾವುದೂ ಆಟೋ ಚಾಲಕನ ಅರಿವಿಗೆ ಬಂದಿರಲಿಲ್ಲ. ನಂತರ ವಿಷಯ ತಿಳಿದ ಆಟೋ ಚಾಲಕ ಸುಬಾನ್, ಅಶ್ಮತ್ ಉನ್ನೀಸಾ ಅವರೊಂದಿಗೆ ತೆರಳಿ ಆಜಾದ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ತಮ್ಮ ಆಟೋದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರಯಾಣಿಸಿದವರನ್ನು ಹುಡುಕಿಕೊಂಡು ಹೋಗಿ ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಆಭರಣ ಪತ್ತೆ ಹಚ್ಚಲು ಸಹಕರಿಸಿದ ಆಟೋ ಚಾಲಕ ಸುಬಾನ್ ಸಾಬ್ ಅವರನ್ನು ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಿಎಸ್ಐ ತಿಪ್ಪೇಸ್ವಾಮಿ ಅವರು ಸನ್ಮಾನಿಸಿದರು. ಪತ್ತೆ ಕಾರ್ಯದಲ್ಲಿ ಆಜಾದ್ ನಗರ ಠಾಣೆಯ ಸಿಬ್ಬಂದಿಗಳಾದ ಅಕ್ಬರ್ ಮುಲ್ಲಾ, ಜಗನ್ನಾಥ ಸಿಂಗ್, ಹನುಮಂತಪ್ಪ ಮಡ್ಡಿ, ಪ್ರದೀಪ್ ಕುಮಾರ್ ಪಾಲ್ಗೊಂಡಿದ್ದರು.
ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ
ತಡರಾತ್ರಿ ಅಪಘಾತ: ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ಪ್ರಶಾಂತ್ ನಾಯ್ಕ್ ಸಾವು