ಕನಕಗಿರಿ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಏ.13 ರಿಂದ 20ರೊಳಗೆ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ಸಮೀರ್ ಮುಲ್ಲಾ ಹೇಳಿದರು.
ಇಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದರು. 2023ರ ಸಾರ್ವತ್ರಿಕ ಚುನಾವಣೆಗೆ ಆಯೋಗವು ವೇಳಾಪಟ್ಟಿ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬಳಿಕ ಏ.21ರಂದು ಪರಿಶೀಲನೆ ನಡೆಯಲಿದೆ. ಏ.24 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಯ ಸಹಿ ಕಡ್ಡಾಯ
ಅಭ್ಯರ್ಥಿಗಳು ನಾಮಪತ್ರದ ನಮೂನೆ-2ಬಿ ನಲ್ಲಿ ಸಲ್ಲಿಸಬೇಕು. ಸೂಚಕರು, ಅಭ್ಯರ್ಥಿಯ ಸಹಿ ಇರಬೇಕು. ಸಹಿ ಇರದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು. ನಮೂನೆ-26ರಲ್ಲಿ 20 ರೂ. ಛಾಪಾ ಕಾಗದ, 2 ಮೂಲ ಪ್ರತಿ ಹಾಗೂ 3 ನಕಲು ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ, ಅಫಿಡೆವಿಟ್ನ ಎಲ್ಲ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.
ಒಬ್ಬ ಅಭ್ಯರ್ಥಿ 4 ನಾಮಪತ್ರ ಸಲ್ಲಿಸಲು ಅವಕಾಶವಿದೆ. ಚುನಾವಣಾ ಉದ್ದೇಶಕ್ಕಾಗಿಯೇ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ತೆರೆದಿರುವ ಹೊಸ ಬ್ಯಾಂಕ್ ಖಾತೆಯ ಪಾಸ್ಬುಕ್ನ ಪ್ರತಿ ಸಲ್ಲಿಸಬೇಕು. ದೈನಂದಿನ ವೆಚ್ಚಗಳ ವಿವರ ಮತ್ತು ಓಚರ್ ಪ್ರತಿ ಮೂರು ದಿನಕ್ಕೊಮ್ಮೆ ಪರಿಶೀಲನೆಗೆ ಹಾಜರುಪಡಿಸಬೇಕು. ಚುನಾವಣಾ ಪ್ರಚಾರದ ಸಭೆ, ಸಮಾರಂಭ, ರ್ಯಾಲಿಗಳಿಗೆ ಪರವಾನಗಿ ಕಡ್ಡಾಯವಾಗಿ ಪಡೆಯಬೇಕು.
ನೀತಿ ಸಂಹಿತೆ ಉಲ್ಲಂಘಿಸಿದರೆ ಕೇಸ್
ಅನುಮತಿ ಪಡೆಯದೆ ಪ್ರಚಾರ ಹಾಗೂ ಮಕ್ಕಳನ್ನು ಬಳಸಿಕೊಂಡರೆ ಅಂತಹ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ಮೇಲೂ ಮುಲಾಜಿ ಇಲ್ಲದೇ ಕೇಸ್ ದಾಖಲಿಸಲಾಗುವುದು. ಇದಕ್ಕೆ ಯಾವ ಅಭ್ಯರ್ಥಿಗಳು, ಮುಖಂಡರು ಆಸ್ಪದ ನೀಡಬಾರದು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕೋಲಾರದಿಂದ ನಾಮಪತ್ರ: ಸ್ಪಷ್ಟ ಸುಳಿವು ನೀಡಿದ ಸಿದ್ದರಾಮಯ್ಯ!
ಸಹಾಯಕ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಸಂಜಯ್ ಕಾಂಬ್ಳೆ, ವಿವಿಧ ಪಕ್ಷಗಳ ಮುಖಂಡರಾದ ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಪ್ರಭು ಉಪ್ಪನಾಳ, ವೆಂಕಟೇಶ ಗೋಡಿನಾಳ, ಚಂದ್ರಶೇಖರ ಮುಸಾಲಿ, ಬಾಳಪ್ಪ ಇತರರಿದ್ದರು.