ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ಅಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಮಧ್ಯ ನೇರಾನೇರ ಜಿದ್ದಿ ಏರ್ಪಟ್ಟಿದೆ.
ಬಿಜೆಪಿ ನಾಯಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಾರೆ.
ಹಾಗೇ ಇಂದು ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ಸವಾಲೊಂದನ್ನು ಹಾಕಿದ್ದಾರೆ. ಬಿಜೆಪಿ ನಾಳೆ (ಬುಧವಾರ) ಮಧ್ಯಾಹ್ನ 1 ಗಂಟೆಯೊಳಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಿ ಎಂದು ಚಾಲೆಂಜ್ ಮಾಡಿದ್ದಾರೆ.
ದೆಹಲಿಯ ಜನರು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಹಾಗಾಗಿ ನಾಳೆ ಮಧ್ಯಾಹ್ನ 1ಗಂಟೆಯೊಳಗೆ ಅವರ ಹೆಸರನ್ನು ಪಕ್ಷ ತಿಳಿಸಲಿ. ಯಾರೇ ಆದರೂ ಸರಿ ನಾನು ಅವರೊಂದಿಗೆ ಚರ್ಚೆಗೆ ಸಿದ್ಧ. ಯಾವುದೇ ಸ್ಥಳದಲ್ಲಿ ಬೇಕಾದರೂ ಚರ್ಚೆ ಏರ್ಪಡಿಸಬಹುದು. ಹಾಗೊಮ್ಮೆ ನಾಳೆ ನಾನು ಕೊಟ್ಟ ಸಮಯದೊಳಗೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಹೇಳದೆ ಇದ್ದರೆ ನಂತರ ನಾನು ಮತ್ತೊಂದು ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಇಂದು ಚುನಾವಣಾ ಪ್ರಣಾಳಿಕೆ ಮಾಡಿದ ವೇಳೆ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಗೊತ್ತಾಗದಿದ್ದರೆ ನಾವೇಕೆ ಆ ಪಕ್ಷಕ್ಕೆ ಮತ ಹಾಕಬೇಕು ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನೀವು ನಮಗೆ ಮತ ಹಾಕಿದರೆ ನಾವು ಮುಖ್ಯಮಂತ್ರಿ ಯಾರೆಂದು ನಿರ್ಧರಿಸುತ್ತೇವೆ ಎಂದು ಅಮಿತ್ ಷಾ ಹೇಳಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂದು ಜನರೇ ನಿರ್ಧರಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಕೂಡ ಆಪ್ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವನ್ನಿಟ್ಟಿಕೊಂಡು ವ್ಯಂಗ್ಯವಾಗಿ ಟ್ವೀಟ್ ಮಾಡಿತ್ತು. ಅಮೆರಿಕದ ಕುಸ್ತಿಪಟು ಜಾನ್ ಸೇನಾ ಅವರ ಫೋಟೋವೊಂದನ್ನು ಪೋಸ್ಟ್ ಮಾಡಿ, ಅವರ ಸಿಗ್ನಿಚರ್ ಹೇಳಿಕೆಯಾದ ಯು ಕಾಂಟ್ ಸೀ ಮಿ(ನೀವು ನನ್ನನ್ನು ನೋಡಲು ಸಾಧ್ಯವಿಲ್ಲ) ಎಂದು ಕ್ಯಾಪ್ಷನ್ ಬರೆದಿತ್ತು. ಕೊನೆಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ನಮಗೆ ಗೊತ್ತಾಯಿತು. ಅವರು ಜಾನ್ ಸೇನಾ…ಯಾಕೆಂದರೆ ನಾವು ಅವರನ್ನು ನೋಡಲು ಸಾಧ್ಯವಿಲ್ಲ ಎಂದು ಟೀಕೆ ಮಾಡಿತ್ತು. ಕೇಜ್ರಿವಾಲ್ VS ಕೌನ್ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿತ್ತು.(ಏಜೆನ್ಸೀಸ್)