ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೊಬ್ಬರೂ ಸಾಯದಂತೆ ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಉಂಟಾದ ಆಕ್ಸಿಜನ್ ಕೊರತೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ 730 ಮೆಟ್ರಿಕ್ ಟನ್ ಆಕ್ಸಿಜನ್ ಕಳುಹಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಬುಧವಾರದಂದು ಕೇಂದ್ರವು 730 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ನವದೆಹಲಿಗೆ ಕಳುಹಿಸಿಕೊಟ್ಟಿದೆ. ಈ ರೀತಿ ಆಕ್ಸಿಜನ್ ಪೂರೈಕೆ ಮಾಡುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈ ಕೋರ್ಟ್ಗೆ ಅರವಿಂದ ಕೇಜ್ರಿವಾಲ್ ಧನ್ಯವಾದ ತಿಳಿಸಿದ್ದಾರೆ. ನಮ್ಮ ರಾಜ್ಯಕ್ಕೆ ಪ್ರತಿನಿತ್ಯ ಇದೇ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯ ಅಗತ್ಯತೆ ಇದೆ. ಒಂದು ವೇಲೆ ಕೇಂದ್ರ ಪ್ರತಿದಿನ ಈ ರೀತಿ ಪೂರೈಕೆ ಮಾಡಿದರೆ ರಾಜ್ಯದಲ್ಲಿ ಒಬ್ಬರೂ ಆಕ್ಸಿಜನ್ ಸಿಗದೆ ಬಲಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈಗಾಗಲೇ ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇದ್ದ ಹಿನ್ನೆಲೆಯಲ್ಲಿ ಬೆಡ್ಗಳ ಸಂಖ್ಯೆಯನ್ನು ಇಳಿಸಲಾಗಿತ್ತು. ಆದರೆ ಈಗ ಆಕ್ಸಿಜನ್ ಪೂರೈಕೆಯಾಗುತ್ತಿರುವುದರಿಂದಾಗಿ ಬೆಡ್ ಸಂಖ್ಯೆ ಏರಿಸಿ ಎಂದು ಅವರು ಆಸ್ಪತ್ರೆಗಳಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)