ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆಗೆ ಪೊಲೀಸರಿಗೆ ಸರ್ಕಾರ ಮುಕ್ತ ಅವಕಾಶ ಕೊಟ್ಟಿದ್ದರಿಂದಲೇ ಹಲವರ ಬಂಧನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.
ಸಂವಿಧಾನ ದಿನಾಚರಣೆ ನಿಮಿತ್ತ ವಿಧಾನಸೌಧ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದರು.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ತನಿಖೆ ಆರಂಭಿಸಿರುವುದನ್ನು ಸ್ವಾಗತಿಸುತ್ತೇನೆ. ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ರದ್ದಾದ ಹೆಸರುಗಳ ಸೇರ್ಪಡೆ, ಎರಡೆರಡು ಕಡೆ ಹೆಸರಿದ್ದರೆ ಒಂದು ಕಡೆ ಕೈಬಿಡುವ ಪ್ರಕ್ರಿಯೆಯನ್ನು ಆಯೋಗವೇ ನೋಡಿಕೊಳ್ಳಲಿದೆ ಎಂದರು.
ಶಾಂತಿ, ಸುವ್ಯವಸ್ಥೆ: ಗಡಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ, ಕರ್ನಾಟಕದ ಬಸ್ಗಳಿಗೆ ಹಾನಿಯಾಗದಂತೆ ಮಹಾರಾಷ್ಟ್ರ ಸರ್ಕಾರದ ಜತೆ ಮಾತನಾಡಿರುವೆ. ಗೃಹ ಸಚಿವರು ಹಾಗೂ ಡಿಜಿಪಿ ಅಲ್ಲಿನ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿ, ಸೌಹಾರ್ದತೆ ಕಾಪಾಡಲು ಕ್ರಮ ವಹಿಸಲಿದ್ದಾರೆ ಎಂದು ಸಿಎಂ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಅಧಿವೇಶನದ ವೇಳೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.