ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದಲ್ಲಿ ಫೆ.4-15ರ ವರೆಗೆ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗುತ್ತಿದೆ ಎಂದು ಡಿಸಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 6 ಜಿಲ್ಲೆಗಳಿಂದ ಅಭ್ಯರ್ಥಿಗಳು ನೇಮಕಾತಿಗೆ ಆಗಮಿಸಲಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸೇನಾ ನೇಮಕಾತಿ ಪ್ರಧಾನ ಕಚೇರಿ ವಲಯದ ಆಶ್ರಯದಲ್ಲಿ ಬೆಳಗಾವಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ ಮತ್ತು ಕಲಬುರ್ಗಿ ಜಿಲ್ಲೆಗಳಿಂದ ಪ್ರವೇಶ ಪತ್ರ ಪಡೆದ ಅಭ್ಯರ್ಥಿಗಳು ಬರಲಿದ್ದಾರೆ.
ಸೇನೆಯ ನಿಗದಿತ ವಿಭಾಗಗಳಲ್ಲಿ ದಾಖಲಾತಿಗಾಗಿ ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತು ಇತರ ಮಾನದಂಡಗಳ ವಿವರಗಳನ್ನು 2020ರ ಡಿ. 4ರಂದು ಬೆಳಗಾವಿ ಸೈನ್ಯದ ನೇಮಕಾತಿ ಕಚೇರಿಯಿಂದ ಭಾರತೀಯ ಸೇನಾ ವೆಬ್ಸೈಟ್ ಮೂಲಕ ಅಭ್ಯರ್ಥಿಗಳ ಆನ್ಲೈನ್ ನೋಂದಣಿ ಮಾಡಲು ಅಧಿಸೂಚನೆ ನೀಡಲಾಗಿತ್ತು. ರಾಜ್ಯದ ಮೇಲಿನ ಜಿಲ್ಲೆಗಳಿಂದ ಒಟ್ಟು 40 ಸಾವಿರ ಅಭ್ಯರ್ಥಿಗಳನ್ನು ಆನ್ಲೈನ್ನಲ್ಲಿ ನೋಂದಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆನ್ಲೈನ್ ಪ್ರವೇಶಪತ್ರ: ಸೇನಾ ನೇಮಕಾತಿ ನಿರ್ದೇಶಕ ರಾಹುಲ್ ಆರ್ಯ ಮಾತನಾಡಿ, ಡಿಡಿಡಿ.್ಜಟಜ್ಞಿಜ್ಞಿಜಿಚ್ಞಚ್ಟಞ.ಜಟ.ಜ್ಞಿ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳ ಆನ್ಲೈನ್ ನೋಂದಣಿ ಹೊಂದಿದ ಪ್ರವೇಶ ಪತ್ರ ನೀಡಲಾಗುವುದು. ಮುಂಬರುವ ನೇಮಕಾತಿ ರ್ಯಾಲಿಯನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ, ಸಹಕಾರ ನೀಡಬೇಕು ಎಂದು ಅವರು ಕೋರಿದರು.
ಡಿಸಿಪಿ ವಿಕ್ರಂ ಆಮ್ಟೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ.ಜಿ.ಬುಜಾರ್ಕಿ, ಡಿಎಸ್ಪಿ ಕರುಣಾಕರ ಶೆಟ್ಟಿ, ಎಸಿಪಿ ಗಣಪತಿ ಗುಡಚಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶಶಿಕಾಂತ ಮುನ್ಯಾಳ, ಜಿಲ್ಲಾ ಕ್ರೀಡಾ ಅಧಿಕಾರಿ ವಿ.ಎಸ್. ಪಾಟೀಲ, ಬಿಎಸ್ಎನ್ಎಲ್ ಅಧಿಕಾರಿ ಎನ್.ಟಿ. ಬಾಳೇಕುಂದ್ರಿ ಇದ್ದರು.