ಅರಕೇರಾ: ನಾರಾಯಣಪುರ ಬಲದಂಡೆ ನಾಲೆಗೆ ಏ.20 ರವರೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮನಗೌಡ ಮಂಗಳವಾರ ಒತ್ತಾಯಿಸಿದ್ದಾರೆ.
ಮಾ.30 ರವರೆಗೆ ನೀರು ಹರಿಸಲು ಎನ್ಆರ್ಬಿಸಿ ಸಲಹಾ ಸಮಿತಿ ನಿರ್ಧರಿಸಿದ್ದು, ಇದು ಅವೈಜ್ಞಾನಿಕವಾಗಿದೆ. ಫಸಲು ಕೈಗೆ ಸೇರುವ ಸಮಯದಲ್ಲಿ ನೀರು ಸ್ಥಗಿತಗೊಳಿಸುವ ನಿರ್ಣಯ ಸರಿಯಿಲ್ಲ. ನಾಲೆ ವ್ಯಾಪ್ತಿಯ ರೈತರು ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ, ಸಜ್ಜೆ, ಶೇಂಗಾ ಸೇರಿ ವಿವಿಧ ಬೆಳೆಗಳನ್ನು ಬೆಳೆದಿದ್ದು, ಸಮರ್ಪಕ ನೀರು ಹರಿಸದಿದ್ದಲ್ಲಿ ಫಸಲು ಕೈ ಸೇರುವುದಿಲ್ಲ. ಇದರಿಂದ ರೈತರು ಕಂಗಾಲಾಗುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.