ಮಹಾಂತೇಶ ಹಿರೇಮಠ ಅರಕೇರಾ
ಪಟ್ಟಣದಲ್ಲಿ ಪದವಿ ಕಾಲೇಜು ಇಲ್ಲದೆ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ದೂರದ ಕಾಲೇಜುಗಳಿಗೆ ತೆರಳಿ ಓದಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಇದೆ.
ಇದನ್ನೂ ಓದಿ: ಸಂಪಾದಕೀಯ | ವಿದ್ಯಾರ್ಥಿಗಳ ಪರದಾಟ ತಪ್ಪಿಸಿ; ಆನ್ಲೈನ್ ಪ್ರವೇಶಕ್ಕೆ ತಾಂತ್ರಿಕ ಸಮಸ್ಯೆ..
ತಾಲೂಕು ವ್ಯಾಪ್ತಿಯ ಬಹುತೇಕ ಹಳ್ಳಿ, ದೊಡ್ಡಿ, ತಾಂಡಾ ಜನರಿಗೆ ಅರಕೇರಾ ವ್ಯವಹಾರಿಕ ಕೇಂದ್ರವಾಗಿದೆ. ಪ್ರತಿ ಸೌಲಭ್ಯಕ್ಕೂ ಅರಕೇರಾವನ್ನೇ ಅವಲಂಬಿಸಬೇಕಿದೆ. ಆದರೆ, ತಾಲೂಕಿಗೆ ಒಂದು ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲದಿರುವುದು ವಿಪರ್ಯಾಸವೇ ಸರಿ.
ಅರಕೇರಾದಲ್ಲಿರುವ ಸಿದ್ದಯ್ಯ ಹವಲ್ದಾರ ಸರ್ಕಾರಿ ಪದವಿ ಪೂರ್ವ ಕಾಲೇಜು, ಗಲಗದಲ್ಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಇತರ ಪಟ್ಟಣಗಳ ಪಿಯು ಕಾಲೇಜುಗಳಿಂದ ತೇರ್ಗಡೆಯಾಗುತ್ತಿರುವ ನೂರಾರು ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕಾಗಿ ಬೇರೆ ಪಟ್ಟಣಗಳನ್ನು ಅವಲಂಬಿಸಬೇಕಿದೆ. ಪ್ರತಿ ವರ್ಷ ತೇರ್ಗಡೆಯಾದವರು ಸಿರವಾರ, ದೇವದುರ್ಗ, ರಾಯಚೂರು ಇಲ್ಲವೇ ರಾಜ್ಯದ ನಾನಾ ಪದವಿ ಕಾಲೇಜುಗಳಲ್ಲಿ ವ್ಯಾಸಂಗಕ್ಕಾಗಿ ಅಲೆದಾಡುತ್ತಾರೆ.
ಅರಕೇರಾ ಸೇರಿ ಗಲಗ, ಮುಂಡರಗಿ, ಬಿ.ಗಣೇಕಲ್, ಆಲ್ಕೋಡ, ಭೂಮನಗುಂಡ, ಕ್ಯಾದಿಗ್ಗೇರಾ, ಜಾಗೀರ ಜಾಡಲದಿನ್ನಿ, ಮಲ್ಲೆದೇವರಗುಡ್ಡ, ಮುಷ್ಟೂರು, ಕೊತ್ತದೊಡ್ಡಿ ಗ್ರಾ.ಪಂ ವ್ಯಾಪ್ತಿಯ ಅನೇಕ ಹಳ್ಳಿ, ದೊಡ್ಡಿ, ತಾಂಡಾಗಳಿಂದ ತೇರ್ಗಡೆಯಾದ ವಿದ್ಯಾರ್ಥಿಗಳು ದೂರದ ಕಾಲೇಜುಗಳಿಗೆ ತೆರಳಿ ಪದವಿ ವ್ಯಾಸಂಗ ಮಾಡಬೇಕಿದೆ.
ಮಹಿಳೆಯರ ಪಾಲಕರು ಬೇರೆ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಉನ್ನತ ವ್ಯಾಸಂಗದ ಕನಸ್ಸನ್ನು ಹೊತ್ತ ಅನೇಕ ವಿದ್ಯಾರ್ಥಿಗಳು ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಅರಕೇರಾದಲ್ಲಿ ಸುಸಜ್ಜಿತ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿ ಉನ್ನತ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಬೇಕೆಂಬುದು ಈ ಭಾಗದ ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.
ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ
ಸಿರವಾರ, ದೇವದುರ್ಗ, ರಾಯಚೂರು ಇಲ್ಲವೆ ದೂರದ ಪಟ್ಟಣ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆಂದು ಪ್ರಯಾಣಿಸುವುದಕ್ಕೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ದಿನದ ಅರ್ಧ ಸಮಯ ಪ್ರಯಾಣಕ್ಕೆ ಸೀಮಿತವಾಗುತ್ತಿದೆ. ತಾಲೂಕಿನ ವ್ಯಾಪ್ತಿಯ ಅನೇಕ ಹಳ್ಳಿ, ದೊಡ್ಡಿ, ತಾಂಡಾ ಜನರಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಅನೇಕ ವಿದ್ಯಾರ್ಥಿಗಳು, ಅಲ್ಲದೇ ಶಾಲಾ-ಕಾಲೇಜು ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದೆ.
ಅರಕೇರಾ ತಾಲೂಕು ವ್ಯಾಪ್ತಿಯಲ್ಲಿನ ಅನೇಕ ಗ್ರಾಮಗಳಲ್ಲಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಪದವಿ ಪ್ರವೇಶ ಬಯಸಿ ದೂರದ ಪಟ್ಟಣ ಪ್ರದೇಶ ಕಾಲೇಜುಗಳ ಮೊರೆ ಹೋಗಬೇಕಿದೆ. ಇಲ್ಲಿಯೇ ಪದವಿ ಕಾಲೇಜು ಮಂಜೂರು ಮಾಡಿದರೆ ಅನುಕೂಲವಾಗುವುದು. ದೂರದ ಪಟ್ಟಣಗಳಿಗೆ ತೆರಳುವುದರಿಂದ ಹೆಚ್ಚಿನ ಸಮಯ ಪ್ರಯಾಣಕ್ಕೆ ಮೀಸಲಿಡಬೇಕು. ಅಲ್ಲದೇ ವ್ಯಾಸಂಗಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ನೂತನ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಬೇಕು.
| ಮಲ್ಲಿಕಾರ್ಜುನ ಭೇರಿ, ಅರಕೇರಾ, ಪದವಿ ವಿದ್ಯಾರ್ಥಿಕಾಲೇಜು ಬೇಡಿಕೆ ಇರುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ದ್ವನಿ ಎತ್ತಲಾಗುವುದು. ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಉತ್ತಮ ಅಭ್ಯಾಸ ಮಾಡುವುದಕ್ಕೆ ಅಗತ್ಯವಿರುವ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
| ಕರೆಮ್ಮ ಜಿ ನಾಯಕ, ಶಾಸಕಿಅರಕೇರಾ ನೂತನ ತಾಲೂಕು ಕೇಂದ್ರವಾಗಿರುವುದರಿಂದ ಸುತ್ತ ಮುತ್ತಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪದವಿ ಕಾಲೇಜು ಪ್ರಾರಂಭ ಮಾಡಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಉನ್ನತ ಶಿಕ್ಷಣ ಇಲಾಖೆಯಿಂದ ಅನುಮೋದನೆ ಪಡೆಯಬೇಕು. ಸರ್ಕಾರದಿಂದ ಕಾಲೇಜು ಪ್ರಾರಂಭಕ್ಕೆ ಸೂಚನೆಗಳು ಬಂದಲ್ಲಿ, ನೀತಿ-ನಿರ್ಭಂಧನೆಗಳ ಅನ್ವಯದಂತೆ ಕ್ರಮ ಕೈಗೊಳ್ಳಲಾಗುವುದು.
| ಪ್ರೊ.ವಿಶ್ವನಾಥ ಎಂ, ಕುಲಸಚಿವ, ರಾಯಚೂರು ವಿಶ್ವ ವಿದ್ಯಾಲಯ