ಎನ್.ಆರ್.ಪುರ: ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಿಸಿಎ ಜಾರಿ ಮಾಡುತ್ತಿರುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ನೌಕರರ ಸಂಘದಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಮನವಿ ಸಲ್ಲಿಸಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.
ಸಿಸಿಎ ಜಾರಿಯಾದಲ್ಲಿ ಈ ಹಿಂದಿನಂತೆ ಸಿಬ್ಬಂದಿಗಳನ್ನು ನಿಯಂತ್ರಣ ಮಾಡುತ್ತಿರುವ ಸಂಘದ ಆಡಳಿತ ಮಂಡಳಿ ಅವರ ಅಧಿಕಾರ ಮೊಟಕು ಮಾಡಿದಂತಾಗಲಿದೆ. ಜಿಲ್ಲಾ ಬ್ಯಾಂಕ್, ಉಪ ನಿಬಂಧಕರ ನಿಯಂತ್ರಣದಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು. ಎರಡು ಹಂತದ ಆಡಳಿತಗಾರರಿಂದ ನಿಯಂತ್ರಿಸಲ್ಪಡುವುದರಿಂದ ಗೊಂದಲ ಉಂಟಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ವೇತನವನ್ನು ಆಯಾ ಸಂಘಗಳು ನೀಡುವುದರಿಂದ ಸಂಬಂಧಿಸಿದ ಆಡಳಿತ ಮಂಡಳಿ ನಿಯಂತ್ರಣ ಮಾಡುವುದೇ ಸೂಕ್ತವಾಗಿದೆ. ಸರ್ಕಾರ ಸಿಸಿಎ ಜಾರಿ ಮಾಡಿದಲ್ಲಿ ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರವೇ ವೇತನ ನೀಡಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿಸಿಎ ಯಿಂದ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಮಾತ್ರ ಕಲ್ಪಿಸಿ ಉಳಿದ ವರ್ಗಾವಣೆ ಮತ್ತು ನಿಯಂತ್ರಣ, ಶಿಸ್ತು ಕ್ರಮಕ್ಕೆ ಸಿಸಿಎಗೆ ಅಧಿಕಾರ ನೀಡಬಾರದು. ಸಿಸಿಎ ಜಾರಿಗೆ ತರುತ್ತಿರುವ ಬಗ್ಗೆ ಜಿಲ್ಲಾ ಸಹಕಾರ ಕೇಂದ್ರದ ಬ್ಯಾಂಕ್ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚೆ ನಡೆಸಿ ಸಿಸಿಎ ಜಾರಿಯಾಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ಸಂಘದ ಶೃಂಗೇರಿ ತಾಲೂಕು ಪ್ರತಿನಿಧಿ ರಾಜೇಂದ್ರ, ತೆಂಗಿನ ಮನೆ ಸಹಕಾರ ಸಂಘದ ಸಿ.ಒ.ಪ್ರಭಾಕರ, ಬೆಟ್ಟಗೆರೆ ಸಹಕಾರ ಸಂಘದ ಸಿ.ಒ.ದೇವೆಂದ್ರ ಇದ್ದರು.